ಪಾಲಕರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು. ಶಾಲೆಯ ಸರ್ವಾಂಗೀಣ ಪ್ರಗತಿ ಹಾಗೂ ಸಬಲೀಕರಣಕ್ಕೆ ಶಿಕ್ಷಕರು, ಪಾಲಕರು ಮತ್ತು ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಬೇಕು.

ನವಲಗುಂದ:

ಸರ್ಕಾರಿ ಶಾಲೆಗಳಲ್ಲಿ ಇಂದಿನ ಆಧುನಿಕ ದಿನಮಾನಗಳಿಗೆ ತಕ್ಕಂತೆ ಆರಂಭಿಕ ಶಿಕ್ಷಣ ನೀಡುವುದು ಅತ್ಯಗತ್ಯ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3ರಲ್ಲಿ ಪ್ರಸಕ್ತ ಸಾಲಿನ ಎಲ್‌ಕೆಜಿ ತರಗತಿಗೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಪಾಲಕರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು. ಶಾಲೆಯ ಸರ್ವಾಂಗೀಣ ಪ್ರಗತಿ ಹಾಗೂ ಸಬಲೀಕರಣಕ್ಕೆ ಶಿಕ್ಷಕರು, ಪಾಲಕರು ಮತ್ತು ಸಾರ್ವಜನಿಕರು ಒಟ್ಟಾಗಿ ಕೈಜೋಡಿಸುವಂತೆ ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಾಥಮಿಕ ಶಿಕ್ಷಣ ಸಂಯೋಜಕ ಎಸ್.ಎಂ. ಬೆಂಚಿಕೇರಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ಪಾಲಕರಿಗೆ ವರದಾನವಾಗಿದೆ. ಸಾರ್ವಜನಿಕರು ಮತ್ತು ಪಾಲಕರು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಜೋಡಿಸಬೇಕು ಎಂದರು.

ಸಿಆರ್‌ಪಿ ಶಿವಯೋಗಿ ಜಂಗಣ್ಣವರ ಮಾತನಾಡಿದರು. ಪ್ರಧಾನ ಗುರುಮಾತೆ ಎಂ.ಸಿ. ಚನ್ನಪ್ಪಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ ಕಾಶೀಮಸಾಬ ಮಚಲಿಬಂದರ, ಮಾಜಿ ಅಧ್ಯಕ್ಷ ಅಡಿವೆಪ್ಪ ಶಿರಸಂಗಿ, ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ, ರೈತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಮಠಪತಿ, ಬಶೀರಅಹ್ಮದ ಹುನಗುಂದ, ಶಿವಲಿಂಗಯ್ಯ ಹಿರೇಮಠ, ಬಸವರಾಜ ಮಲ್ಲದಾಸರ, ಸಹ ಶಿಕ್ಷಕರಾದ ಕೆ.ಕೆ. ಮಂಕಣಿ, ಎಂ.ಎಚ್. ಚಿಕನಾಳ, ಆರ್.ಬಿ. ಹಳ್ಳಿಕೇರಿ, ಸುರೇಶ ಭಜಂತ್ರಿ, ಕೆ.ಎಫ್. ಬಂತಿ, ಎಂ.ಎನ್. ವಗ್ಗರ ಇದ್ದರು.