ಸರ್ಕಾರದಿಂದ ರೈತರಿಗೆ ನೀಡುವ ಸೌಲಭ್ಯಗಳು ಗುಣಮಟ್ಟದಿಂದ ಕೂಡಿರಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಸರ್ಕಾರದಿಂದ ರೈತರಿಗೆ ನೀಡುವ ಸೌಲಭ್ಯಗಳು ಗುಣಮಟ್ಟದಿಂದ ಕೂಡಿರಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ತಾಪಂ ಮಧುಗಿರಿ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಂಟಿ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪಂಪ್ ಮೋಟಾರ್ ಹಾಗೂ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರದಿಂದ ಕೊಡುವ ಸಾಮಗ್ರಿಗಳ ಪೈಕಿ ರೈತರಿಗೆ ಕಳಪೆ ಪರಿಕರಗಳನ್ನು ನೀಡಿದರೆ ಆರ್ಥಿಕ ಹೊರೆ ಅವರ ಮೇಲೆ ಬೀಳುತ್ತದೆ. ಆದ ಕಾರಣ ಅಧಿಕಾರಿಗಳು ಮುತುವರ್ಜಿ ವಹಿಸಿ ಫಲಾನುಭವಿಗಳಇಗೆ ಅತ್ಯಂತ ಗುಣ ಮಟ್ಟದ ಮೋಟಾರಗಳು, ಪೈಪ್‌ಗಳು, ಹಾಗೂ ಹೆವಿ ಡ್ಯೂಟಿ ಕಾಲರ್ ಗಳನ್ನು ಒದಗಿಸಬೇಕು. ನಾನು 2004ರಲ್ಲಿ ಬೆಳ್ಳಾವಿ ಶಾಸಕನಾಗಿದ್ದಾಗ ವಿತರಿಸಿದ್ದ ಮೋಟಾರಗಳು ಇಂದಿಗೂ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದೇ ನಂಬಿಕೆಯನ್ನು ನಾವು ಈಗಲೂ ಮುಂದುವರಿಸಿದ್ದೇವೆ ಎಂದರು.

ಬೋರವೆಲ್ ಮೋಟಾರಗಳು ಸುರಕ್ಷತೆಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿದ ಅವರು, ಶೇ.99 ರಷ್ಟು ಮೋಟಾರ್ಗಳು ಸುಟ್ಟು ಹೋಗಲು ಕಳಪೆ ಸ್ಟಾರ್ಟರ್ ಹಾಗೂ ಲೂಸ್ ಕಾಂಟ್ಯಾಕ್ಟಗಳೇ ಮುಖ್ಯ ಕಾರಣ ಲೂಸ್ ಕಾಂಟ್ಯಾಕ್ಟ್ ಇದ್ದಾಗ ವಿದ್ಯುತ್ ವ್ಯತ್ಯಯದಿಂದಾಗಿ ಕಾಯಿಲ್ ಕಾಯ್ದು ಮೋಟಾರ್ ಸುಟ್ಟು ಹೋಗುತ್ತದೆ. ಹೀಗಾಗಿ ರೈತರು ಮೊದಲು ಸ್ಟಾರ್ಟರ್ ದೋಷಗಳನ್ನು ಜಾಗರೂಕತೆಯಿಂದ ಸರಿಪಡಿಸಿಕೊಂಡು ನಂತರ ಮೋಟಾರ್ ಬಳಕೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.

ರಾಜ್ಯದಲ್ಲಿ ಸಿಎ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮತ್ತು ನಾನು ಶಾಸಕನಾದ ಮೇಲೆ ಮಧುಗಿರಿ ತಾಲೂಕಿನಲ್ಲಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಮೂಲಗಳಿಂದ 1 ಸಾವಿರಕ್ಕೂ ಅಧಿಕ ಬೋರ್‌ ವೆಲ್‌ಗಳನ್ನು ಮಂಜೂರು ಮಾಡಿಸಿ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ಕಲ್ಪಿಸಿದ್ದೇನೆ ಎಂದರು.

ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿಕವಾಗದೆ ಜಮೀನುಗಳಲ್ಲಿ ಹಸಿರು ಮೇವು ಬೆಳೆದು ಹಸುಗಳನ್ನು ಸಾಕಿ ಡೈರಿಗೆ ಹಾಲು ಸರಬರಾಜು ಮಾಡುವ ನಿಟ್ಟನಲ್ಲಿ ಆರ್ಥಿಕ ಸ್ವಾಲಂಬನೆ ಸಾಧಿಸುವ ಮೂಲಕ ರೈತರು ತಮ್ಮ ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳುವಂತೆ ಶಾಸಕ ಕೆ.ಎನ್.ರಾಜಣ್ಣ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವಪ್ಪ,ತಹಸೀಲ್ದಾರ್ ನಂದಿನಿ ,ತಾಪಂ ಇಓ ಉತ್ತಮ್,ಪುರಸಭೆ ಮುಖ್ಯಾಧಿಕಾರಿ ಸುರೇಶ್, ವಾಲ್ಮೀಕಿ ನಿಗಮದ ಅಧಿಕಾರಿ ಗಂಗರಾಜು, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡರಾಜು, ಎನ್‌.ಗಂಗಣ್ಣ, ಲಾಲಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಕೆಪಿಸಿಸಿ ಸದಸ್ಯರಾದ ಎಂ.ಎಸ್‌..ಮಲ್ಲಿಕಾರ್ಜುನಯ್ಯ, ಸಿದ್ದಾಪುರ ರಂಗಶ್ಯಾಮಣ್ಣ ಇತರರಿದ್ದರು.

ಕೋಟ್‌...

ರೈತರನ್ನು ಯಾರು ಸಹ ಕೈ ಹಿಡಿದು ಬೆಟ್ಟ ಹತ್ತಿಸಲು ಸಾಧ್ಯವಿಲ್ಲ ,ನಾವು ಕೇವಲ ಹಟ್ಟ ಹತ್ತಿಸಲಷ್ಠೇ ಸಾಧ್ಯ. ಕಷ್ಟಪಟ್ಟು ಬೆಟ್ಟದ ತುದಿ ತಲುಪುವುದು ರೈತರ ಜವಾಬ್ದಾರಿಯಾಗಿದೆ. ಸರ್ಕಾರ ನೀಡಿದ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು .ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮುಖೇನ ಕುಟುಂಬಗಳ ಜೀವನ ಮಟ್ಟ ಸುಧಾರಣೆಗೆ ಪೋಷಕರು ರೈತರು ಶ್ರಮಿಸಬೇಕು

- ಕೆ.ಎನ್‌.ರಾಜಣ್ಣ ಶಾಸಕರು ,ಮಧುಗಿರಿ