ನರಸಿಂಹರಾಜಪುರಮಲೆನಾಡಿನ ಭಾಗದಲ್ಲಿ ಅಡಕೆಯೇ ಜೀವಾಳ. ಅಡಕೆಗೆ ಹಳದಿ ಎಲೆ ರೋಗ ಬಂದು 100 ವರ್ಷ ತುಂಬುತ್ತಿದ್ದರೂ ಇನ್ನೂ ರೋಗಕ್ಕೆ ಸೂಕ್ತ ಔಷದಿ ಕಂಡು ಹಿಡಿದಿಲ್ಲ ಎಂದು ರಾಷ್ಟ್ರೀಯ ಕಾಫಿ ಮಂಡಳಿ ನಿರ್ದೇಶಕ ಜಿ.ಎಸ್.ಮಹಾಬಲ ರಾವ್ ವಿಷಾದ ವ್ಯಕ್ತಪಡಿಸಿದರು.

ಅಮೃತ ಸಾವಯವ ಗೊಬ್ಬರ ಉತ್ಪನ್ನಗಳ ಮಹತ್ವದ ಬಗ್ಗೆ ರೈತರಿಗೆ ಮಾಹಿತಿ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಮಲೆನಾಡಿನ ಭಾಗದಲ್ಲಿ ಅಡಕೆಯೇ ಜೀವಾಳ. ಅಡಕೆಗೆ ಹಳದಿ ಎಲೆ ರೋಗ ಬಂದು 100 ವರ್ಷ ತುಂಬುತ್ತಿದ್ದರೂ ಇನ್ನೂ ರೋಗಕ್ಕೆ ಸೂಕ್ತ ಔಷದಿ ಕಂಡು ಹಿಡಿದಿಲ್ಲ ಎಂದು ರಾಷ್ಟ್ರೀಯ ಕಾಫಿ ಮಂಡಳಿ ನಿರ್ದೇಶಕ ಜಿ.ಎಸ್.ಮಹಾಬಲ ರಾವ್ ವಿಷಾದ ವ್ಯಕ್ತಪಡಿಸಿದರು.

ಗುರುವಾರ ಸೀತೂರಿನ ವಿ.ಎಸ್.ಎಸ್.ಎನ್.ಸಭಾಂಗಣದಲ್ಲಿ ಮಲೆನಾಡು ಹಳ್ಳಿ ಅಮೃತ ಆಗ್ರೋ ಕ್ಲಿನಿಕ್, ಕೊಪ್ಪ ಮಹಿಮಾ ಆಗ್ರೋ ಕ್ಲಿನಿಕ್ ಹಾಗೂ ಸೀತೂರು ವಿ.ಎಸ್.ಎಸ್.ಎನ್.ನ ಸಂಯುಕ್ತಾಶ್ರಯದಲ್ಲಿ ನಡೆದ ಅಮೃತ ಸಾವಯವ ಗೊಬ್ಬರ ಉತ್ಪನ್ನಗಳ ಮಹತ್ವದ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಲೆನಾಡು ಭಾಗ ದಲ್ಲಿ ಹವಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಅಡಕೆಗೆ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಅಡಕೆ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಶೃಂಗೇರಿ, ಜಯಪುರ ಭಾಗದಲ್ಲಿ ಹಳದಿ ಎಲೆ ರೋಗದಿಂದ ಅಡಕೆ ಬೆಳೆ ಸಂಪೂರ್ಣ ನಾಶವಾಗಿದೆ. ಜೊತೆಗೆ ಅಡಕೆಗೆ ಎಲೆ ಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದೆ.ಅಡಕೆ ಹಳದಿ ಎಲೆ ರೋಗಕ್ಕೆ ಔಷದಿ ಕಂಡು ಹಿಡಿಯವಂತೆ ಮ್ಯಾಮ್ಕೋ, ಕ್ಯಾಂಪ್ಕೋ, ಅಡಕೆ ಬೆಳೆಗಾರರ ಸಂಘಟನೆಗಳು ಸಾಕಷ್ಟು ಒತ್ತಡ ತಂದಿದ್ದರೂ ಫಲಿತಾಂಶ ಮಾತ್ರ ಶೂನ್ಯ ವಾಗಿದೆ. ವಿಜ್ಞಾನ ಇಷ್ಟು ಮುಂದುವರಿದ್ದರೂ ಅಡಕೆ ಹಳದಿ ಎಲೆ ರೋಗಕ್ಕೆ ಪರಿಹಾರ ಸಿಕ್ಕಿಲ್ಲ. ವಿಜ್ಞಾನಿಗಳ ಪ್ರಯತ್ನ ಫಲ ಕೊಟ್ಟಿಲ್ಲ ಎಂದರು.

ಮಲೆನಾಡಿನಲ್ಲಿ ಅಡಕೆ ಜೊತೆಗೆ ಕಾಫಿ ಹಾಗೂ ಕಾಳು ಮೆಣಸು ಸಹ ವಾಣಿಜ್ಯ ಬೆಳೆಯಾಗಿದೆ. ರೈತರು ರಾಸಾಯನಿಕ ಗೊಬ್ಬರ ಹೆಚ್ಚಾಗಿ ಬಳಸುತ್ತಿದ್ದಾರೆ. ಇದು ಸರಿಯಲ್ಲ,ಸರ್ಕಾರ ಸಹ ಸಾವಯವ ಗೊಬ್ಬರಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ರೈತರು ಯಾವುದೇ ಗೊಬ್ಬರ ಹಾಕಬೇಕಾಗಿದ್ದರೂ ಮಣ್ಣು ಪರೀಕ್ಷೆ ಮಾಡಿಸಿ ಗೊಬ್ಬರ ನೀಡಬೇಕು ಎಂದು ಸಲಹೆ ನೀಡಿದರು.

ಅಡಕೆ ಬೆಳೆ ಈಗ ಮಲೆನಾಡಿನ ಭಾಗದಲ್ಲಿ ಮಾತ್ರ ಇಲ್ಲ. ಬಯಲು ಸೀಮೆ ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿದೆ. ಮಲೆನಾಡು ಭಾಗದಲ್ಲಿ ಅಡಕೆ ಜೊತೆಗೆ ಅಂತರಬೆಳೆಯಾಗಿ ಕಾಫಿ ಚೆನ್ನಾಗಿ ಬರುತ್ತಿದೆ. ಶೇ.30 ರಷ್ಟು ಕಾಫಿ ಭಾರತ ದೇಶ ದಲ್ಲೇ ಖರ್ಚಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಕಾಫಿ ಬೆಳೆಗೆ ಇನ್ನಷ್ಟು ಉತ್ತಮ ಧಾರಣೆ ಬರಲಿದೆ ಎಂದು ಭವಿಷ್ಯ ನುಡಿದರು.

ಸಭೆ ಅಧ್ಯಕ್ಷತೆಯನ್ನು ಸೀತೂರು ವಿ.ಎಸ್.ಎಸ್.ಎನ್.ಅಧ್ಯಕ್ಷ ಬೆಮ್ಮನೆ ಮೋಹನ್ ವಹಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಮಲೆನಾಡ ಹಳ್ಳಿ ಅಮೃತ ಆರ್ಗೋನಿಕ್ ಕ್ಲಿನಿಕ್ ನ ರೀಜನಲ್ ಡೈರಕ್ಟರ್ ಮಂಜುನಾಥ್ ಹಾಗೂ ವಿಜ್ಞಾನಿ ಡಾ. ಪರಮೇಶ್ವರ್ ಅವರು ಅಮೃತ ಸಾವಯವ ಗೊಬ್ಬರ ಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ರೈತರಿಗೆ ಮಾಹಿತಿ ನೀಡಿದರು.