ಚನ್ನಪಟ್ಟಣ: ಪ್ರತಿಯೊಂದು ಮನೆಯಲ್ಲಿ ದೇವರ ಪೂಜಾ ಕೋಣೆ ಇರುವಂತೆ ಮನೆಗೊಂದು ಗ್ರಂಥಾಲಯವಿದ್ದರೆ ಆ ಮನೆ ಜ್ಞಾನದ ಸಂಪತ್ತಿನಿಂದ ಕೂಡಿ, ಯುವ ಜನಾಂಗಕ್ಕೆ ದಾರಿದೀಪವಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದರು.

ಪಟ್ಟಣದ ಮಂಗಳವಾರಪೇಟೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆ ಮನೆಗೊಂದು ಗ್ರಂಥಾಲಯದ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯದ ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸುವ ಗುರಿ ಹೊಂದಿದೆ. ಪ್ರತಿಯೊಂದು ಮನೆಯಲ್ಲಿ ಪುಸ್ತಕಗಳನ್ನಿರಿಸಿ ಕುಟುಂಬದ ಸದಸ್ಯರು ಹಾಗೂ ಬಂಧು ಬಾಂಧವರು ನಿರಂತರ ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನಾಧಾರಿತ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಜನರಲ್ಲಿ ಪುಸ್ತಕ ಸಂಸ್ಕೃತಿ ಹಾಗೂ ಓದುವ ಸಮಾಜ ನಿರ್ಮಾಣದ ಆಶಯ ಹೊಂದಿರುವ ಪುಸ್ತಕ ಪ್ರಾಧಿಕಾರವು ಪ್ರತಿ ಜಿಲ್ಲೆಯಲ್ಲಿ ಮನೆಗೊಂದು ಗ್ರಂಥಾಲಯ ನಿರ್ಮಾಣ ಕಾರ್ಯಕ್ರಮ ಆಯೋಜಿಸಿ ಇದರ ಅಡಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪುಸ್ತಕ ಓದುವ ಹವ್ಯಾಸಿಗಳ ಜಾಗೃತಿ ಸಮಿತಿ ರಚಿಸಿ ಜಿಲ್ಲೆಯಾದ್ಯಂತ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸಾಗಿದೆ. ಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಸ್ವಾಮಿ ಮಾತನಾಡಿ. ಗ್ರಂಥಾಲಯಗಳು ದೇಶದ ಬೌದ್ಧಿಕ, ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಉನ್ನತಿಯ ಕೇಂದ್ರಗಳಾಗಿದ್ದು ಓದುವ ಸಮಾಜ ನಿರ್ಮಾಣಕ್ಕೆ ಬುನಾದಿಗಳಾಗುತ್ತವೆ ಎಂದು ತಿಳಿಸಿದರು.


ಕನ್ನಡ ಪುಸ್ತಕ ಪ್ರಾಧಿಕರದ ಜಿಲ್ಲಾ ಜಾಗೃತ ಸಮಿತಿಗೆ ಕವಿತಾರಾವ್, ಮಹಮದ್ ಯಾಕೂಬ್ ಪಾಷಾ, ರಾಜಶೇಖರ್, ಎಸ್. ಪದ್ಮರೇಖಾ, ಕೆ.ಎಸ್.ಧನಂಜಯ, ಎಸ್.ರುದ್ರೇಶ್ವರ, ನಾಗೇಂದ್ರ, ಗಂ.ದಯಾನಂದ, ಎಸ್. ಮಂಜಪ್ಪ, ಟಿ.ಎನ್. ಚಿಕ್ಕವೀರಯ್ಯ, ಸಿದ್ದಯ್ಯ, ೧೧ ಜನರ ಸಮಿತಿ ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಪುಸ್ತಕ ಪ್ರಾಧಿಕಾರದ ಅಧಿಕಾರಿ ಶ್ರೀನಿವಾಸ್ ಕರಿಯಪ್ಪ, ಶಾಲೆಯ ಮುಖ್ಯಶಿಕ್ಷಕ ಎಂ. ಮಂಜಪ್ಪ, ಶಿಕ್ಷಕರಾದ ಎಚ್.ಎಸ್. ಭವ್ಯಶ್ರೀ. ಬಿ.ಇ.ಸುನೀತ, ಡಾ.ಪಿ.ಆರ್. ಹೀರಾನಾಯಕ್, ಸೌಮ್ಯನಾಯಕ್, ಲಕ್ಷ್ಮೀ, ಶ್ರೀನಿವಾಸ್, ಪುಟ್ಟಪ್ಪ, ನಜ್ಮಾ ಹಾಗೂ ಇತರರು ಇದ್ದರು.

ಪೊಟೋ೨೦ಸಿಪಿಟಿ೨:

ಮಂಗಳವಾರಪೇಟೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದದ ಯೋಜನೆ ಮನೆಗೊಂದು ಗ್ರಂಥಾಲಯ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭವನ್ನು ನಡೆಯಿತು.