ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಶುಕ್ರವಾರ ನಡೆಯಿತು. 60 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡಪ್ರಭ ದಿನ ಪತ್ರಿಕೆ, ರೋಟರಿ ಮಡಿಕೇರಿ ವುಡ್ಸ್, ಅರಣ್ಯ ಇಲಾಖೆ, ಅನ್ವೇಕರ್ ಸಿಲ್ವರ್ ಜ್ಯುವೆಲ್ಲರಿ, ಅರವಿಂದ್ ಜ್ಯುವೆಲ್ಲರಿ, ಎಕ್ಸ್ ಲೆಂಟ್ ಕಾರ್ ವಾಶ್ ಸಂಸ್ಥೆಗಳ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಶುಕ್ರವಾರ ನಡೆಯಿತು. ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ 60 ಮಕ್ಕಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರಕಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಪಾಲ್ಗೊಂಡು ಮಾತನಾಡಿ ಭಾರತದಲ್ಲಿನ ಪಶ್ಚಿಮಘಟ್ಟ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಇದರಲ್ಲಿ ಅಪಾರ ಸಂಖ್ಯೆಯ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಆದ್ದರಿಂದ ಈ ಅಮೂಲ್ಯ ಸಂಪತ್ತು ಹಾಗೂ ಜೀವ ವೈವಿಧ್ಯತೆಯ ತಾಣವಾಗಿರುವ ಈ ಪಶ್ಚಿಮಘಟ್ಟವನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕೆಂದು ಕರೆ ನೀಡಿದರು.

ಮಕ್ಕಳಲ್ಲಿ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಅಭಿಮಾನ ಮೂಡಿಸಬೇಕು. ಇದಕ್ಕೆ ಕನ್ನಡಪ್ರಭ ಆಯೋಜಿಸುತ್ತಿರುವ ಚಿತ್ರಕಲಾ ಸ್ಪರ್ಧೆ ಕೂಡ ಪೂರಕವಾಗಿದೆ ಎಂದು ಶ್ಲಾಘಿಸಿದರು.

ರೋಟರಿ ಮಡಿಕೇರಿ ವುಡ್ಸ್ ನ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ ಅರಣ್ಯ ಸಂಪತ್ತು ಉಳಿಸಿದರೆ ಮಾತ್ರ ಮನುಷ್ಯರು ಉಳಿಯಲು ಸಾಧ್ಯ. ಕಾಡಿನಲ್ಲಿ ಹುಲಿ ಸಂಖ್ಯೆ ಹೆಚ್ಚಾಗಬೇಕಾದರೆ ಜಿಂಕೆಗಳ ಸಂಖ್ಯೆಯೂ ಹೆಚ್ಚಾಗಬೇಕಿದೆ. ಅದರಂತೆ ಎಲ್ಲಾ ಪ್ರಾಣಿಗಳ ಸಂಖ್ಯೆಯೂ ಅಧಿಕವಾಗುವುದರೊಂದಿಗೆ ಅರಣ್ಯದ ಉಳಿವಿಗೆ ನಾವೆಲ್ಲರೂ ಕೈಜೋಡಿಸಬೇಕೆಂದರು.

ಅರಣ್ಯ ಹಾಗೂ ವನ್ಯಜೀವಿ ಚಿತ್ರಕಲೆ ಸ್ಪರ್ಧೆಯಲ್ಲಿ ಮಕ್ಕಳು ಉತ್ತಮವಾಗಿ ಚಿತ್ರವನ್ನು ರಚಿಸುವ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಮಕ್ಕಳ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಕಸ ಮುಕ್ತ ಭಾರತವನ್ನಾಗಿಸುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ಕಸವನ್ನು ಹಾಕದೆ ಸ್ವಚ್ಛ ಪರಿಸರವನ್ನು ಸೃಷ್ಟಿಸಬೇಕೆಂದರು.

ಕನ್ನಡಪ್ರಭ ಮೈಸೂರು ಜಾಹೀರಾತು ವ್ಯವಸ್ಥಾಪಕರಾದ ಕೃಷ್ಣ ಪ್ರಸಾದ್ ಮಾತನಾಡಿ ಪ್ರಾಣಿ ಹಾಗೂ ಅರಣ್ಯದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ ಎಂದು ತಿಳಿಸಿದರು.

ರೋಟರಿ ಮಡಿಕೇರಿ ವುಡ್ಸ್ ನ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಮಾತನಾಡಿ ನಮ್ಮ ಜೀವನದಲ್ಲಿ ಪ್ರಾಣಿಗಳು ಕೂಡ ಒಡನಾಡಿಗಳಂತಿದೆ. ಆದ್ದರಿಂದ ಅದನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮಕ್ಕಳಿಗೆ ಕನ್ನಡಪ್ರಭ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್ಲಾ ಮಕ್ಕಳು ವಿಭಿನ್ನ ರೀತಿಯಲ್ಲಿ ಚಿತ್ರಗಳನ್ನು ರಚಿಸಿದ್ದಾರೆ ಎಂದರು.

ಚಿತ್ರಕಲಾ ಶಿಕ್ಷಕರಾದ ರಾಮ್ ಗೌತಮ್ ಮಾತನಾಡಿ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿದೆ. ಮತ್ತಷ್ಟು ಕಲಾತ್ಮತೆಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ನೀಡಿರುವ ವಿಷಯದ ಬಗ್ಗೆ ಪರಿಣಾಮಕಾರಿಯಾಗಿ ಚಿತ್ರವನ್ನು ರಚಿಸಬೇಕೆಂದು ಸಲಹೆ ನೀಡಿದರು.

ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು ಪ್ರಸ್ತಾವಿಕವಾಗಿ ಮಾತನಾಡಿದರು. ಸಿದ್ದಾಪುರ ವರದಿಗಾರ ಆರ್. ಸುಬ್ರಮಣಿ ನಿರೂಪಿಸಿದರು. ಸೋಮವಾರಪೇಟೆ ವರದಿಗಾರ ಮುರುಳೀಧರ್ ವಂದಿಸಿದರು. ಸುವರ್ಣ ನ್ಯೂಸ್ ವರದಿಗಾರ ರವಿ, ಕನ್ನಡಪ್ರಭ ಮಡಿಕೇರಿ ವರದಿಗಾರ ಮೋಹನ್ ರಾಜ್, ಶನಿವಾರಸಂತೆ ವರದಿಗಾರ ಹರೀಶ್, ಸುಂಟಿಕೊಪ್ಪ ವರದಿಗಾರ ವಿನ್ಸೆಂಟ್, ನಾಪೋಕ್ಲು ವರದಿಗಾರ ದುಗ್ಗಳ ಸದಾನಂದ, ಕುಶಾಲನಗರ ವರದಿಗಾರ ಚಂದ್ರಮೋಹನ್, ಚಿತ್ರಕಲಾ ಶಿಕ್ಷಕ ಪ್ರಸನ್ನ ಕುಮಾರ್‌ ಪಾಲ್ಗೊಂಡಿದ್ದರು. -------------------------ಕ್ವೋಟ್---------------------------

ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೆ ಗೊತ್ತು. ಮಕ್ಕಳಿಗೆ ಒಳ್ಳೆಯ ವೇದಿಕೆ ಸಿಕ್ಕಂತಾಯಿತು. ಶಾಲಾ ಪಠ್ಯದ ಜೊತೆಗೆ ಆಗಾಗ ಇಂತಹ ಸ್ಪರ್ಧೆ ನಡೆದರೆ ಮಕ್ಕಳ ಸೃಜನ ಶೀಲತೆ ಇನ್ನಷ್ಟು ಹೆಚ್ಚಾಗುತ್ತದೆ. ಕೊಡಗಿನ ಮಕ್ಕಳಿಗೆ ಕನ್ನಡಪ್ರಭ ವತಿಯಿಂದ ಇಂಥದೊಂದು ಅವಕಾಶ ಕಲ್ಪಿಸಿದ್ದು, ಅರ್ಥಪೂರ್ಣ ಸುದ್ದಿಗಳ ಜೊತೆಗೆ ಮಕ್ಕಳ ವಿಕಾಸನಕ್ಕೂ ಪತ್ರಿಕೆ ಕೆಲಸ ಮಾಡುತ್ತಿದೆ.

-ಎಂ.ಎಸ್. ನಾಸೀರ್, ಮಾಲೀಕರು ಎಕ್ಸ್ ಲೆಂಟ್ ಕಾರ್ ವಾಶ್ ಮಡಿಕೇರಿ

-------------------------------------------------------------

ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತರು!

ಕನ್ನಡಪ್ರಭ ಆಯೋಜಿಸಿದ ಕೊಡಗು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ 4ರಿಂದ 5ನೇ ತರಗತಿ ವರೆಗೆ ನಡೆದ ಸ್ಪರ್ಧೆಯಲ್ಲಿ ಮದೆನಾಡು ಬಿ.ಜಿ.ಎಸ್. ಪಬ್ಲಿಕ್ ಶಾಲೆಯ ಗಾನವಿ.ಬಿ.ಸಿ(ಪ್ರ), ಮಡಿಕೇರಿಯ ಸಂತ ಮೈಕಲರ ಶಾಲೆಯ ಹರ್ಷಿಣಿ ಎಂ.ಕೆ.(ದ್ವಿ), ಸಂತ ಮೈಕಲರ ಶಾಲೆಯ ಕನ್ನಡ ಮಾಧ್ಯಮದ ಆರಾಧನ ಎಸ್.ಬಿ.(ತೃ), ಶನಿವಾರಸಂತೆ ಸುಪ್ರಜಾ ಗುರುಕುಲ ಶಾಲೆಯ ಬಿ.ಡಿ. ಧನ್ಯ ಹಾಗೂ ಶ್ರೀ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆಯ ಕನ್ನಿಕಾ ಸಮಾಧಾನಕರ ಬಹುಮಾನ ಗಳಿಸಿದರು.

6ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕೂರ್ಗ್ ಪಬ್ಲಿಕ್ ಶಾಲೆಯ ಆಯುಷ್ ಎಂ.ಬಿ.(ಪ್ರ), ಕ್ರಿಸ್ಟ್ ಶಾಲೆಯ ಭುವನಾ ಸೋಮಯ್ಯ(ದ್ವಿ), ಮಡಿಕೇರಿ ಬ್ಲಾಸಂ ಶಾಲೆಯ ಹಿಬಾ ಫಾತಿಮಾ(ತೃ), ಕ್ರಿಸ್ಟ್ ಶಾಲೆಯ ಮೊಹಮ್ಮದ್ ಅರ್ಫಾತ್ ಹಾಗೂ ಕೊಡಗು ವಿದ್ಯಾಲಯದ ಮನ್ವಿತಾ ಸಮಾಧಾನಕರ ಪ್ರಶಸ್ತಿ ಗಳಿಸಿದರು.

8ರಿಂದ 10ನೇ ತರಗತಿ ವರೆಗೆ ನಡೆದ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ಹನಿಯಾ(ಪ್ರ), ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ತೇಜಸ್ ಟಿ.ಕೆ.(ದ್ವಿ), ಕಾವೇರಿ ಶಾಲೆಯ ಅರ್ನವ್ (ತೃ), ಮಡಿಕೇರಿ ಸಂತ ಜೋಸೆಫರ ಶಾಲೆಯ ಕೃಪಾ ಎ.ಎಲ್. ಹಾಗೂ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಹರ್ಷಿತಾ ಬಿ.ಎಸ್. ಸಮಾಧಾನಕರ ಬಹುಮಾನ ಪಡೆದರು.