ಧಾರವಾಡ:

ಬಿಜೆಪಿಯಲ್ಲಿ ಒಂದು ವಾಶಿಂಗ್‌ ಮಶಿನ್‌ ಇದೆ. ಯಾರೇ, ಎಷ್ಟೇ ಭ್ರಷ್ಟರಿದ್ದರೂ ಅದರಲ್ಲಿ ಹಾಕಿದರೆ ಅವರು ಶುದ್ಧರಾಗಿ 24 ಕ್ಯಾರೆಟ್‌ ಚಿನ್ನವಾಗುತ್ತಾರೆ ಎಂದು ಆಪ್‌ನ ಏಳು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರಿದಕ್ಕೆ ಸಂತೋಷ ಲಾಡ್ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಶಿಂಗ್‌ ಫೌಡರ್‌ ನಿರ್ಮಾ, ನಿಮ್ಮಪ್ಪ ಮಾಡಿದ ಕರ್ಮಾ ಎಂದು ನಾವು ಚಿಕ್ಕವರಿದ್ದಾಗ ವಾಶಿಂಗ್‌ ಫೌಡರ್‌ ಬಗ್ಗೆ ಬರುವ ಜಾಹೀರಾತನ್ನು ತಮಾಶೆ ಮಾಡುತ್ತಿದ್ದೆವು. ಆ ರೀತಿ ಯಾರೇ ಭ್ರಷ್ಟಾಚಾರ ಮಾಡಿದರೂ ಬಿಜೆಪಿ ಬಂದ ಮೇಲೆ ಅವರು ಶುದ್ಧವಾಗಿ ಬಿಡುತ್ತಾರೆ. ಇದು ಬಿಜೆಪಿಯ ತಂತ್ರಗಾರಿಕೆಯೂ ಹೌದು. ರಾಘವ ಚಡ್ಡಾ ಬಿಜೆಪಿಗೆ ಏಕೆ ಬೇಕಿತ್ತು? ಪಂಜಾಬ್‌ನಲ್ಲಿ ಸರ್ಕಾರ ಬೀಳಿಸಲು ಈ ತಂತ್ರಗಾರಿಕೆ ಎಂದು ಲಾಡ್‌ ಕಿಡಿಕಾರಿದರು.

ಶಾಸಕ ವಿನಯ ಕುಲಕರ್ಣಿ ಪರವಾಗಿ ಇತ್ತೀಚೆಗೆ ನಡೆದ ಮೌನ ಮೆರವಣಿಗೆ ಸಮರ್ಥಿಸಿಕೊಂಡ ಲಾಡ್‌, ಈ ಬಗ್ಗೆ ವಿರುದ್ಧವಾಗಿ ಮಾತನಾಡಿದವರ ಬಗ್ಗೆ ತಮಗೆ ಮಾಹಿತಿ ಇಲ್ಲ. ನ್ಯಾಯಾಲಯದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು. ಮೌನ ಮೆರವಣಿಗೆಯಲ್ಲಿ ಯಾರೂ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರಶ್ನಿಸಿಲ್ಲ ಎನಿಸುತ್ತದೆ ಎಂದ ಅವರು, ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ ಪ್ರಕರಣದಲ್ಲಿ ಅಂಜುಮನ್‌ ಇಸ್ಲಾಂ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಪರಾರಿಯಾಗಿದ್ದು, ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. ಕಾನೂನು ಪ್ರಕಾರ ತನಿಖೆ ನಡೆಯಲಿದೆ ಎಂದರು.

ಪಂಚ ರಾಜ್ಯಗಳ ಚುನಾವಣೆಯ ವಿಚಾರವಾಗಿ ಮಾತನಾಡಿದ ಲಾಡ್‌, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಯೊಂದಿಗೆ ನಾವು ಗೆಲ್ಲುತ್ತೇವೆ. ಕೇರಳದಲ್ಲಿ ಯಡಿಎಫ್ ಮೈತ್ರಿಯಲ್ಲಿ ಗೆಲ್ಲುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ಅಸ್ಸಾಂನಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇನೆ ಎಂದರು.