ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳ ಜ್ಞಾನ, ಪ್ರತಿಭೆ ಮತ್ತು ಸೃಜನಶೀಲತೆ ಹೊರಹಾಕಲು ಅತ್ಯುತ್ತಮ ವೇದಿಕೆ. ವಿಜ್ಞಾನ, ಕಲೆ, ಕರಕುಶಲ, ಸಾಹಿತ್ಯ ಹಾಗೂ ಪುರಾಣಗಳಂತಹ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪ್ರದರ್ಶನಗಳು ಸಹಾಯ ಮಾಡುತ್ತವೆ.

ಧಾರವಾಡ:

ಯುವ ವಿಜ್ಞಾನಿಗಳ ಅನ್ವೇಷಣೆ ಪ್ರಾರಂಭವಾಗುವುದು ವಸ್ತು ಪ್ರದರ್ಶನಗಳಿಂದ. ಇದು ವಿದ್ಯಾರ್ಥಿಗಳ ಭವಿಷ್ಯದ ಸಾಧನೆಗೆ ಸ್ಫೂರ್ತಿ ತುಂಬುವ ಚಿಲುಮೆಗಳಾಗುತ್ತವೆ ಎಂದು ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

ಜೆಎಸ್‌ಎಸ್‌ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಅಂತರ ಶಾಲೆಗಳ ಕಲೆ, ಕರಕುಶಲ, ವಿಜ್ಞಾನ ಮತ್ತು ಪೌರಾಣಿಕ ವಸ್ತುಪ್ರದರ್ಶನ ಅಂಕುರಮ್‌ದಲ್ಲಿ ಮಾತನಾಡಿದ ಅವರು, ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳ ಜ್ಞಾನ, ಪ್ರತಿಭೆ ಮತ್ತು ಸೃಜನಶೀಲತೆ ಹೊರಹಾಕಲು ಅತ್ಯುತ್ತಮ ವೇದಿಕೆ. ವಿಜ್ಞಾನ, ಕಲೆ, ಕರಕುಶಲ, ಸಾಹಿತ್ಯ ಹಾಗೂ ಪುರಾಣಗಳಂತಹ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪ್ರದರ್ಶನಗಳು ಸಹಾಯ ಮಾಡುತ್ತವೆ. ವಿಜ್ಞಾನ ಮಾನವನ ಜೀವನವನ್ನು ಸುಲಭಗೊಳಿಸಿದ ಮಹತ್ತರ ಶಕ್ತಿ ಎಂದರು.

ವಿದ್ಯಾರ್ಥಿಗಳು ತಯಾರಿಸಿರುವ ವಿವಿಧ ವಿಜ್ಞಾನ ಮಾದರಿಗಳು, ಅವರು ಪ್ರಶ್ನಿಸುವ ಮನಸ್ಸು, ಸಂಶೋಧನಾ ಆಸಕ್ತಿ ಮತ್ತು ಹೊಸದನ್ನು ಕಂಡು ಹಿಡಿಯುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ವಿದ್ಯಾರ್ಥಿಯಲ್ಲೂ ಒಂದೊಂದು ರೀತಿಯ ಕೌಶಲ್ಯ. ಬುದ್ಧಿವಂತಿಕೆ ಕಲ್ಪನೆಗಳನ್ನು ಹೊಂದಿರುತ್ತಾರೆ. ಅದಕ್ಕೆ ತಕ್ಕ ಹಾಗೆ ಇಂದು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರು ಮಂಡಿಸಿರುವ ಪ್ರತಿಯೊಂದು ವಿಷಯದ ಮಾದರಿಗಳು ಅವರಲ್ಲಿರುವ ಬುದ್ಧಿವಂತಿಕೆಯನ್ನು ಅಭಿವ್ಯಕ್ತಗೊಳಿಸುವಲ್ಲಿ ಸಹಾಯಕಾರಿಯಾಗಿದೆ ಎಂದು ಹೇಳಿದರು.

ಜೆಎಸ್‌ಎಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಕೇವಲ ಓದುವುದು, ಬರೆಯುವುದು ಮತ್ತು ಪರೀಕ್ಷೆಗಳಿಗೆ ಹಾಜರಾಗಿ ಉತ್ತಮ ಅಂಕ ಗಳಿಸುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಪಠ್ಯೇತರ ಚಟುವಟಿಗಳು ಸಹ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ತಂಡದ ಕೆಲಸ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವೂ ಬೆಳೆಯುತ್ತದೆ ಎಂದರು.

ಜೆಎಸ್‌ಎಸ್‌ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪಾಲಕರ ಪಾತ್ರ ಬಹುದೊಡ್ಡದು. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಅವರೊಂದಿಗೆ ಪಾಲಕರು ಸಹ ಕೈಜೋಡಿಸಿದರೆ ಅವರು ಹೆಚ್ಚಿನ ಆಸಕ್ತಿ ತೋರಿಸಿ ತಮ್ಮ ಕಾರ್ಯದಲ್ಲಿ ಸಫಲರಾಗಬಲ್ಲರು ಎಂದರು.

ಪ್ರದರ್ಶನದಲ್ಲಿ ಒಟ್ಟು 15 ವಿವಿಧ ಶಾಲೆಗಳು ಪಾಲ್ಗೊಂಡಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯಕ್ರಮ ಕ್ರಮಕ್ಕೆ ಸಂಬಂಧಿಸಿದ ಆಕರ್ಷಕ ಮಾದರಿ ಹಾಗೂ ವಿವಿಧ ಭಾಷಾ ವಿಭಾಗಗಳಿಗೆ ಸಂಬಂಧಿಸಿದ ಶೈಕ್ಷಣಿಕ ಪ್ರದರ್ಶನಗಳನ್ನು ಅನಾವರಣಗೊಳಿಸಿದರು. ಫಿಸಿಕ್ಸ್ ಆಫ್ ಏರೋ ಸ್ಪೇಸ್ ಮಾಡೆಲ್ ಎಲ್ಲರ ಗಮನ ಸೆಳೆಯಿತು. ಪ್ರೆಸೆಂಟೇಷನ್ ಬಾಲಕಿಯ ಪ್ರೌಢಶಾಲೆ ಮಕ್ಕಳು ತಯಾರಿಸಿದ ಪ್ರವೇಶ ಸಾಧ್ಯ ಪಾದಚಾರಿ ಮಾರ್ಗ ಗಮನ ಸೆಳೆಯಿತು.

ಐಟಿಐ ಕಾಲೇಜಿನ ಮಹಾವೀರ ಉಪಾಧ್ಯೆ, ಪ್ರಾಚಾರ್ಯ ಡಯಾನ ಜೋಗಿನ್, ವರ್ಷಿಣಿ ಪಾಟೀಲ್, ಲೀನಾ ವಾಜ್, ಸುಷ್ಮಾ ಬಿರಿಜನ್ನವರ್ ಇದ್ದರು.