ಭಕ್ತ, ಭಗವಂತನ ಮಧ್ಯೆ ಅನುಭಾವ ಸಂಬಂಧ: ಡಾ.ಗೊರುಚ

| Published : Oct 31 2023, 01:15 AM IST

ಸಾರಾಂಶ

ಹಿರಿದಪ್ಪ ಅಂಗಡಿ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು
ಕನ್ನಡಪ್ರಭ ವಾರ್ತೆ, ಶಿಕಾರಿಪುರ ಮಹಾದೇವನ ಅಂಗಡಿ ದಿನಪೂರ್ತಿ ತೆರೆದಿರುತ್ತದೆ, ಈ ಅನುಭಾವದ ಅಂಗಡಿಯಲ್ಲಿ ಭಕ್ತಿನಿಷ್ಠೆ ಸಮರ್ಪಣಾ ಮನೋಭಾವ ಎಂಬ ಕಣ್ಣಿಗೆ ಕಾಣದ ಹಣ ನೀಡಿ, ಪುಣ್ಯ ಎಂಬ ವಸ್ತುಗಳನ್ನು ಪಡೆಯಬೇಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಜ್ಯ ಸಮಿತಿ ಗೌರವ ಸಲಹೆಗಾರ, ನಾಡೋಜ ಡಾ. ಗೊ.ರು. ಚನ್ನಬಸಪ್ಪ ಹೇಳಿದರು. ಪಟ್ಟಣದ ಬಸವಾಶ್ರಮದ ಅನುಭವ ಮಂಟಪದಲ್ಲಿ ಭಾನುವಾರ ಸಂಜೆ ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಬಸವ ಸೇವಾ ಸಂಸ್ಥೆ ವತಿಯಿಂದ ನಡೆದ ವಿಶೇಷ ಉಪನ್ಯಾಸ ಮಾಲೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ''''ಹಿರಿದಪ್ಪ ಅಂಗಡಿ'''' ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು. ಭಕ್ತ ಹಾಗೂ ಭಗವಂತನ ಮಧ್ಯೆ ಅನುಭಾವದ ಸಂಬಂಧವಿದೆ. ಭಕ್ತಿಯ ಪರಾಕಾಷ್ಠೆಯಿಂದ ಮಾತ್ರ ಭಗವಂತನ ಕೃಪೆ ಗಳಿಸಲು ಸಾಧ್ಯ. ಮಹಾದೇವ ಶೆಟ್ಟಿಯ ಅಂಗಡಿ ದಿನಪೂರ್ತಿ ತೆರೆದಿದ್ದು ಅವನ ಅಂಗಡಿಯಲ್ಲಿನ ವಸ್ತುಗಳು ಸಾಮಾನ್ಯ ಮನುಷ್ಯನಿಗೆ ಕಾಣಲು ಸಾಧ್ಯವಿಲ್ಲ. ಗಿರಾಕಿಗಳು ಭಕ್ತಿಯ ಬಂಡವಾಳದ ಮೂಲಕ ನಿಷ್ಠೆ ಸಮರ್ಪಣಾ ಮನೋಭಾವ ಎಂಬ ಕಣ್ಣಿಗೆ ಕಾಣದ ಹಣ ನೀಡಿ ಪುಣ್ಯ ಎಂಬ ಕಣ್ಣಿಗೆ ಕಾಣದ ವಸ್ತುಗಳನ್ನು ಪಡೆಯಬೇಕಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು. ಶರಣ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಸದಸ್ಯತ್ವ ಜತೆಗೆ ದತ್ತಿನಿಧಿ ಸ್ಥಾಪಿಸಿ ಪರಿಷತ್‌ಗೆ ಭದ್ರ ಬುನಾದಿ ಹಾಕುವಂತೆ ಕರೆ ನೀಡಿದ ಅವರು ಹಲವು ಶ್ರೇಷ್ಟ ಶರಣರಿಗೆ ಜನ್ಮ ನೀಡಿದ ತಾಲೂಕಿನಲ್ಲಿ ಶರಣ ಸಾಹಿತ್ಯ ಪರಿಷತ್ ಎಂಬ ಸಂಘಟನೆಯನ್ನು ಸದೃಢವಾಗಿಸುವಂತೆ ಕರೆ ನೀಡಿದರು. ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಶಿಧರಸ್ವಾಮಿ ಕಣಿವೆಮನೆ ವಹಿಸಿ ಮಾತನಾಡಿದರು. ಬಸವಾಶ್ರಮದ ಮಾತೆ ಶರಣಾಂಬಿಕೆ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಮಹಾರುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಹಕಾರಿ ತೋಟಗಾರಿಕಾ ಮಹಾಮಂಡಳ ಅಧ್ಯಕ್ಷ ಡಾ. ಬಿ.ಡಿ. ಭೂಕಾಂತ್, ಕದಳಿ ವೇದಿಕೆ ಅಧ್ಯಕ್ಷೆ ಕಾಂಚನಾ ಕುಮಾರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸುಬಾಷ್‌ಚಂದ್ರ ಸ್ಥಾನಿಕ್, ಪ್ರಧಾನ ಕಾರ್ಯದರ್ಶಿ ಜಿ.ಎಂ. ನಾಗರಾಜ್, ಶಿವಾನಂದಪ್ಪ, ಸೋಮಶೇಖರ್ ಗಟ್ಟಿ, ಶರಣು ವಿಶ್ವವಚನ ಫೌಂಡೇಶನ್ ಜಿಲ್ಲಾಧ್ಯಕ್ಷ ಅಂಗಡಿ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಗದೀಶ್ ಸ್ವಾಗತಿಸಿ, ನಾಗರಾಜ್ ನಿರೂಪಿಸಿದರು. ಶಿವಾನಂದಪ್ಪ ವಂದಿಸಿದರು. - - - -30ಕೆಎಸ್.ಕೆಪಿ2: ಶಿಕಾರಿಪುರದಲ್ಲಿ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ನಾಡೋಜ ಡಾ. ಗೊ.ರು. ಚನ್ನಬಸಪ್ಪ ಉದ್ಘಾಟಿಸಿದರು.