ಅಣೆಕಟ್ಟು ಸುರಕ್ಷತಾ ಕಾಯ್ದೆ 2021ರ ಅನ್ವಯ ಪ್ರೊ.ಶರದ್ ಜೋಷಿ ನೇತೃತ್ವದ 8 ಜನರ ನೀರಾವರಿ ತಜ್ಞರ ತಂಡ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಆಲಮಟ್ಟಿ ಜಲಾಶಯದ ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಅಣೆಕಟ್ಟು ಸುರಕ್ಷತಾ ಕಾಯ್ದೆ 2021ರ ಅನ್ವಯ ಪ್ರೊ.ಶರದ್ ಜೋಷಿ ನೇತೃತ್ವದ 8 ಜನರ ನೀರಾವರಿ ತಜ್ಞರ ತಂಡ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಆಲಮಟ್ಟಿ ಜಲಾಶಯದ ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸಿದೆ.

ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದಲ್ಲಿ ಜಲಾಶಯದ ಬಾಳಿಕೆ, ನೀರಿನ ಸೋರಿಕೆ, ಭೂಕಂಪ ನಿರೋಧಕ ಸಾಮರ್ಥ್ಯ, ಗೇಟ್‌ಗಳ ಕಾರ್ಯಕ್ಷಮತೆ, ಸಿವಿಲ್ ಕಾಮಗಾರಿಗಳು ಮತ್ತು ಕಾಫರ್ ಜಲಾಶಯಗಳ ಗುಣಮಟ್ಟ, ತಜ್ಞರ ಅಭಿಪ್ರಾಯ ಮುಂತಾದ ಅಂಶಗಳನ್ನು ಪರಿಶೀಲಿಸಿದರು. ತಂಡದ ನೇತೃತ್ವ ವಹಿಸಿದ್ದ ಪ್ರೊ.ಶರದ್ ಜೋಷಿ ಮಾತನಾಡಿ, ಜಲಾಶಯದ ಗುಣಮಟ್ಟ ಉತ್ತಮವಾಗಿದೆ. ಸುರಕ್ಷತೆ ಮತ್ತು ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಪರಿಶೀಲಿಸಿದ್ದೇವೆ ಎಂದು ತಿಳಿಸಿದರು. ತಜ್ಞರು ಪ್ರತ್ಯೇಕ ವರದಿ ಸಲ್ಲಿಸಿದ ಬಳಿಕ ಅವುಗಳನ್ನು ಕ್ರೋಡೀಕರಿಸಿ ಡಿಸೆಂಬರ್ 2026ರೊಳಗೆ ರಾಜ್ಯ ಸರ್ಕಾರಕ್ಕೆ ಸಮಗ್ರ ಮೌಲ್ಯಮಾಪನ ವರದಿ ಸಲ್ಲಿಸಲಾಗುವುದು. ಅಗತ್ಯವಿರುವ ತುರ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ ಎಲ್ಲ ಅಣೆಕಟ್ಟುಗಳ ಪರಿಶೀಲನೆ:

ರಾಜ್ಯದಲ್ಲಿರುವ ಅಣೆಕಟ್ಟುಗಳ ಸುರಕ್ಷತೆ ಪರಿಶೀಲನೆಗೆ 16 ತಂಡ ರಚಿಸಲಾಗಿದೆ. ಪರಿಶೀಲನೆ ಬಳಿಕ ಜಲಾಶಯಗಳನ್ನು ಸಂಪೂರ್ಣ, ಭಾಗಶಃ ಮತ್ತು ಅಲ್ಪ ಪ್ರಮಾಣದ ದುರಸ್ತಿ ಎಂದು ಮೂರು ವರ್ಗಗಳಲ್ಲಿ ವಿಂಗಡಿಸಲಾಗುವುದು. ಜಲಾಶಯಗಳಿಂದಲೇ ಭೂಕಂಪ ಸಂಭವಿಸುತ್ತದೆ ಎಂಬುದು ತಪ್ಪು ಕಲ್ಪನೆ, ಭೂಮಿಯ ಪದರುಗಳ ಚಲನೆಯಿಂದ ಕೆಲವು ಕಡೆ ಭೂಕಂಪಗಳು ಸಂಭವಿಸುತ್ತವೆ. ನದಿಗಳ ಒತ್ತುವರಿಯಿಂದಾಗಿ ಪ್ರವಾಹಗಳು ಉಂಟಾಗುತ್ತವೆ. ನದಿ ಪಾತ್ರಗಳ ಒತ್ತುವರಿ ತೆರವು ಅಗತ್ಯವಿದೆ ಎಂದು ಪ್ರೊ. ಜೋಷಿ ಅಭಿಪ್ರಾಯಪಟ್ಟರು.ರಾಜ್ಯದಲ್ಲಿ ಈವರೆಗೆ 4 ರಿಕ್ಷರ್‌ ಮಾಪನಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪನ ಸಂಭವಿಸಿದ ಉದಾಹರಣೆ ಇಲ್ಲ. ರಾಜ್ಯದ ಜಲಾಶಯಗಳು 7 ರಿಕ್ಷರ್‌ ಮಾಪನದ ಭೂಕಂಪ ಸಂಭವಿಸಿದರೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ವಿದೇಶಗಳಲ್ಲಿ ನದಿಗಳು ಪಥ ಬದಲಿಸಿದ ವರದಿಯಿದ್ದು, ಆದರೆ ಭಾರತದಲ್ಲಿ ಅಂತಹ ಘಟನೆಗಳು ವರದಿಯಾಗಿಲ್ಲ ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ಶಿವಪ್ರಸಾದ, ಎಸ್.ಎಲ್. ರಾಜಶೇಖರ, ಕೆ. ಸತ್ಯನಾರಾಯಣ, ಅಮರನಾಥ ಹೆಗಡೆ, ಕಮಲಶೇಖರನ್, ಪ್ರಾಣೇಶ ಮುರನಾಳ, ಎಸ್. ರಂಗರಾಮ, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಬಿ.ಎಸ್. ಪಾಟೀಲ, ಕೊಳ್ಳಿ, ವಿಠ್ಠಲ ಜಾಧವ, ರವಿ ಚಂದ್ರಗಿರಿ ಸೇರಿದಂತೆ ಅಧಿಕಾರಿಗಳು ಇದ್ದರು.