ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬಾಗಲಕೋಟೆಯ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ 1.1 ಕೆ.ಜಿ ತೂಕದ ನವಜಾತ ಶಿಶುವಿಗೆ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ.ರಮೇಶ ಹಟ್ಟಿ ಮತ್ತು ವೈದ್ಯರ ತಂಡ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸುವ ಮೂಲಕ ಪ್ರಾಣಾಪಾಯದಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆಯ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ 1.1 ಕೆ.ಜಿ ತೂಕದ ನವಜಾತ ಶಿಶುವಿಗೆ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ.ರಮೇಶ ಹಟ್ಟಿ ಮತ್ತು ವೈದ್ಯರ ತಂಡ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸುವ ಮೂಲಕ ಪ್ರಾಣಾಪಾಯದಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರೇಶ್ವರ ಆಸ್ಪತ್ರೆಯ ಪ್ರಸೂತಿ ವಿಭಾಗದಲ್ಲಿ ಅವಧಿಗೆ ಮೊದಲೇ ಜನಿಸಿದ್ದ ಮಗು ತೀವ್ರ ಕಡಿಮೆ ತೂಕದೊಂದಿಗೆ ಪ್ರಾಣಕ್ಕೆ ಅಪಾಯಕಾರಿಯಾದ ಎರಡು ಅಪರೂಪದ ಜನ್ಮಜಾತ ಸಮಸ್ಯೆಗಳಿಂದ ಬಳಲುತ್ತಿತ್ತು. ನವಜಾತ ಶಿಶುವನ್ನು ಎಚ್.ಎಸ್.ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷಿಸಿದ ವೈದ್ಯರು ಶಿಶುವಿನ ಸಣ್ಣಕರುಳಿನ ದಾರಿಯಲ್ಲಿ ತಡೆಯುಂಟಾಗುವ ಡ್ಯುಒಡಿನಲ್ ಅಟ್ರೆಸಿಯಾ ಮತ್ತು ಮಲದ್ವಾರದ ರಚನೆಯಲ್ಲಿ ಲೋಪವಿರುವ ಅನೋರೆಕ್ಟಲ್ ಮಾಲ್ಫಾಮ್‌ಷನ್ ಎಂಬ ಎರಡು ಗಂಭೀರ ತೊಂದರೆಗಳಿರುವುದನ್ನು ಗುರುತಿಸಿದ್ದಾರೆ. ಏಕಕಾಲಕ್ಕೆ ನವಜಾತ ಶಿಶುವಿನ ಎರಡು ತೊಂದರೆಗಳಿಗೆ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿತ್ತು. ವೈದ್ಯರ ತಂಡ ಸಮಯೋಚಿತ ನಿರ್ಧಾರ ತೆಗೆದುಕೊಂಡು ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಕೌಶಲ್ಯದಿಂದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನವಜಾತ ಶಿಶುವಿನ ಪ್ರಾಣಕ್ಕೆ ಅಪಾಯವಾಗಿದ್ದ ಎರಡು ತೊಂದರೆಗಳನ್ನು ಸರಿಪಡಿಸಿದ್ದಾರೆ.

ಶಸ್ತ್ರಚಿಕಿತ್ಸೆ ಸಂದರ್ಭ ಚಿಕ್ಕಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸಾ ತಜ್ಞರಿಗೆ ಅಗತ್ಯದ ಸಹಾಯ ನೀಡಿದರು. ಶಸ್ತ್ರಚಿಕಿತ್ಸೆ ನಂತರ ಮಗು ಚೇತರಿಸಿಕೊಂಡಿದ್ದು, ಆರೋಗ್ಯದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. ಮಗುವಿನ ಆರೋಗ್ಯದಲ್ಲುಂಟಾದ ಸುಧಾರಣೆ ಪಾಲಕರಿಗೆ ಹರ್ಷತಂದಿದೆ. ಚಿಕಿತ್ಸೆಯನ್ನು ನಗದು ರಹಿತ ಯೋಜನೆಯಡಿ ಒದಗಿಸಲಾಗಿದೆ.

ಅಪಾಯದಲ್ಲಿದ್ದ ನವಜಾತ ಶಿಶುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ.ರಮೇಶ ಹಟ್ಟಿ, ಶಸ್ತ್ರಚಿಕಿತ್ಸಾ ತಜ್ಞ ಡಾ.ವಿಕ್ರಮ್ ನಾಗಠಾಣ, ಅರವಳಿಕೆ ತಜ್ಞೆ ಡಾ.ಶಿಲ್ಪಾ ಮಾಸೂರ, ಚಿಕ್ಕಮಕ್ಕಳ ತಜ್ಞ ಡಾ.ಗಂಗಾಧರ ಮಿರ್ಜಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಶುಶ್ರೂಷಕ ಸಿಬ್ಬಂದಿಯನ್ನು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ .ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಎಚ್.ಎಸ್.ಕೆ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರೊಜೆಕ್ಟ್ ಡೈರೆಕ್ಟರ್ ಡಾ.ನವೀನ ಚರಂತಿಮಠ, ಉಪ ಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ ಮತ್ತು ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ಅಭಿನಂದಿಸಿದ್ದಾರೆ.