ಚಿತ್ರದುರ್ಗದ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಸಂಭ್ರಮ-2026 ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ಹಾರ್ಮೊನಿಯಂ ನುಡಿಸಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾಂಸ್ಕೃತಿಕವಾಗಿ ಅಧಃಪತನಕ್ಕೆ ಹೋಗಿರುವ ಪ್ರಸ್ತುತ ದಿನಗಳಲ್ಲಿ ಕುಟುಂಬ, ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳ ಮನೋ ವಿಕಾಸಕ್ಕೆ ಪಠ್ಯೇತರ ಚಟುವಟಿಕೆ ಅಗತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆದರ್ಶ ಯುವಕ/ಯುವತಿ ಸಂಘ, ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದೊಂದಿಗೆ ತುರುವನೂರು ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಸಂಭ್ರಮ-2026ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಠ್ಯೇತರ ಭಾಗವಾಗಿ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಉಲ್ಲಾಸವೆನಿಸುತ್ತದೆ. ಮನುಷ್ಯ ನೈತಿಕತೆ, ವಿವೇಕವಂತನಾಗಿ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಕಲೆ ಬೇಕು. ಕಲಾವಿದರನ್ನು ಪ್ರೋತ್ಸಾಹಿಸಿದರೆ ಪ್ರತಿಭೆಯನ್ನು ಗುರುತಿಸಿ ನಾಡು ದೇಶವನ್ನು ಕಟ್ಟಬಹುದು ಎಂದು ಹೇಳಿದರು.

ಸಾಂಸ್ಕೃತಿಕ ಕಲೆಯಿಂದ ಸಮಾಜಕ್ಕೆ ವಿವೇಕ ಹೇಳುವ ಪ್ರಜ್ಞೆ ಮೂಡುತ್ತದೆ. ಪರಂಪರೆ ಜೊತೆ ಪಿಸು ಮಾತುಗಳನ್ನಿಟ್ಟುಕೊಳ್ಳಬೇಕು. ಧರ್ಮಜಾತಿ, ಲಿಂಗದ ನಡುವೆ ತಾರತಮ್ಯವಾಗುತ್ತಿದೆ. ಯುದ್ಧ ಜೀವಗಳನ್ನು ಬಲಿ ತೆಗೆದುಕೊಂಡು ದೇಶವನ್ನು ಸುಡುತ್ತದೆ. ಸ್ವಾರ್ಥ, ಅಹಂಕಾರ, ಪ್ರತಿಷ್ಟೆಯನ್ನು ಹೋಗಲಾಡಿಸಬೇಕಾದರೆ ಇಂತಹ ಸಾಂಸ್ಕೃತಿಕ ಸಂಭ್ರಮಗಳ ಅವಶ್ಯಕತೆಯಿದೆ. ಸಾಂಸ್ಕೃತಿಕ ವಾತಾವರಣ ಕ್ಷಮಾ ಗುಣವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗಳಿಗಷ್ಟೆ ಓದುವುದಕ್ಕೆ ಸೀಮಿತವಾಗುವುದು ಸರಿಯಲ್ಲ. ಪಠ್ಯೇತರ ಚಟುವಟಿಕೆಗಳ ಕಡೆಗೂ ಆಸಕ್ತಿಯಿಟ್ಟುಕೊಳ್ಳುವಂತೆ ಸಲಹೆ ನೀಡಿದರು.

ಚಿತ್ರದುರ್ಗ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ಹಾರ್ಮೊನಿಯಂ ನುಡಿಸುವ ಮೂಲಕ ಸಂಗೀತ ಸಂಭ್ರಮ ಉದ್ಘಾಟಿಸಿದರು. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಉಪ ಸಭಾಪತಿ ಇ.ಅರುಣ್‍ಕುಮಾರ್, ಮಹಿಳಾ ಪೊಲೀಸ್ ಠಾಣೆ ಪಿಎಸ್ ಐ ಯಶೋಧಮ್ಮ, ಹಿಂದುಳಿದ ವರ್ಗಗಳ ವಸತಿ ನಿಲಯದ ಮೇಲ್ವಿಚಾರಕಿಯರಾದ ಲಕ್ಷ್ಮಿದೇವಿ, ದೀಪಾರಾಣಿ, ಸಕೀನಾಬಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕøತೆ ಓಂಕಾರಮ್ಮ ಶ್ರೀನಿವಾಸ್, ಎಸ್ ಜೆಎಂ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಸಿ.ಕಣ್ಮೇಶ್ ವೇದಿಕೆಯಲ್ಲಿದ್ದರು. ಎಂ.ಕೆ.ಹರೀಶ್ ಮತ್ತು ತಂಡ, ಕೆ.ಗಂಗಾಧರ್, ಹಿಮಂತರಾಜ್, ಜಗದೀಶ್ ಮತ್ತು ಸಂಗಡಿಗರು ಜಾನಪದ ಗೀತೆ, ಚಿತ್ರಗೀತೆ, ಭಾವಗೀತೆಗಳನ್ನು ಹಾಡಿ ವಿದ್ಯಾರ್ಥಿನಿಯರನ್ನು ರಂಜಿಸಿದರು.