ಕಣ್ಣಿನ ತಪಾಸಣೆ, ರಕ್ಷಣೆ ಅಗತ್ಯ: ಡಾ. ರಾಜಶೇಖರ ಬಳ್ಳಾರಿ

| Published : Feb 02 2024, 01:00 AM IST

ಸಾರಾಂಶ

ದೃಷ್ಟಿಯು ನಮ್ಮ ದೇಹದ ಅತ್ಯಂತ ನಿರ್ಣಾಯಕ ಇಂದ್ರಿಯಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರೂ ನಿಯಮಿತವಾಗಿ ನುರಿತ ವೈದ್ಯರಿಂದ ಆಗಾಗ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣುಗಳ ರಕ್ಷಣೆಗೆ ಮುಂದಾಗಬೇಕೆಂದು ಡಾ. ರಾಜಶೇಖರ ಬಳ್ಳಾರಿ ಹೇಳಿದರು.

ಗದಗ: ದೃಷ್ಟಿಯು ನಮ್ಮ ದೇಹದ ಅತ್ಯಂತ ನಿರ್ಣಾಯಕ ಇಂದ್ರಿಯಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರೂ ನಿಯಮಿತವಾಗಿ ನುರಿತ ವೈದ್ಯರಿಂದ ಆಗಾಗ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣುಗಳ ರಕ್ಷಣೆಗೆ ಮುಂದಾಗಬೇಕೆಂದು ವೈದ್ಯ ಡಾ. ರಾಜಶೇಖರ ಬಳ್ಳಾರಿ ಹೇಳಿದರು.

ನಗರದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಸ್.ಆರ್.ಪಿ ಕೇಂದ್ರದಲ್ಲಿ ಗುರುವಾರ ಅಂಧ ವಿದ್ಯಾರ್ಥಿಗಳಿಗೆ ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ರೋಟರಿ ಸಂಸ್ಥೆ ಮದ್ರಾಸ್ ಪೂರ್ವ ಸಂಸ್ಥೆಯು ರೋಟರಿ ಕ್ಲಬ್ ಹಾಗೂ ರೋಟರಿ ಸಂಸ್ಥೆ ಶಿರ್ಶಿಯ ಮುಖಾಂತರ ನೀಡಲಾದ ಸ್ಮಾರ್ಟ್ ವಿಜನ್ ಗ್ಲಾಸಿಸ್ (ಕನ್ನಡಕ) ವಿತರಿಸಿ ಮಾತನಾಡಿದರು.

ಈ ಸ್ಮಾರ್ಟ್ ವಿಜನ್ ಗ್ಲಾಸಿಸ್ (ಕನ್ನಡಕ) ಉಪಕರಣವು ಒಂದಕ್ಕೆ ಸುಮಾರು ೩೦ ಸಾವಿರ ರು.ಗಳಾಗಿದ್ದು ಕುರಡತನದ ತೊಂದರೆಯಲ್ಲಿರುವ ಮಕ್ಕಳಿಗೆ ಓದು ಬರಹದಲ್ಲಿ ಇದು ಸಹಾಯವಾಗಲಿದೆ. ಇದನ್ನು ಸೂಕ್ಷ್ಮವಾಗಿ ಉಪಯೋಗಿಸಿ ನಂತರ ಸೂಕ್ತ ಸ್ಥಳದಲ್ಲಿ ಭದ್ರವಾಗಿ ಇಡಬೇಕು ಎಂದರು

ರೋಟರಿ ಸಂಸ್ಥೆ, ವಲ್‌ಫೇರ್ ಸೊಸಾಯಿಟಿಯ ಅಧ್ಯಕ್ಷ ಶ್ರೀಧರ ಸುಲ್ತಾನಪೂರ ಮಾತನಾಡಿ, ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಇದು ಸಹಾಯಕಾರಿ ಆಗುವುದಲ್ಲದೆ ಚಲನೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದರು.

ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಮೌಳಿ ಜಾಲಿ ಮಾತನಾಡಿದರು.

ಎಚ್.ಎಸ್. ಪಾಟೀಲ, ಬಾಲಕೃಷ್ಣ ಕಾಮತ್ ಅವರು ಮಕ್ಕಳಿಗೆ ಸ್ಮಾರ್ಟ್ ವಿಜನ್ ಗ್ಲಾಸಿಸ್ ಅಳವಡಿಸಿ ಪ್ರಾಯೋಗಿಕ ತಿಳುವಳಿಕೆ ನೀಡಿದರು.

ಸಂಕೇತ ಕುಲಕರ್ಣಿ, ಮಲ್ಲೀಕ ಬೆದವಟ್ಟಿ, ಉದಯ ಬಣಕಾರ, ಶ್ರೀನಿವಾಸ ದೊಡ್ಡಮನಿ, ಸಂಗೀತಾ ಭರಮಗೌಡ್ರ, ಜಗದೀಶ ಜೋಗಿ, ನಾಗಪ್ಪ ಶಿರೋಳ ಸೇರಿದಂತೆ ೧೦ ಜನರಿಗೆ ಸ್ಮಾರ್ಟ್ ವಿಜನ್ ಕನ್ನಡಕ ವಿತರಿಸಲಾಯಿತು.

ಶಶಿಧರ ಚಳಗೇರಿ, ರವಿ ಹೆಬ್ಬಳ್ಳಿ, ಸುನೀತಾ ತಿಮ್ಮನಗೌಡ್ರ, ಕಟಗಿ ಹಾಗೂ ಪಾಲಕ ಪೋಷಕರು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.

ಗಾಯಕಿ ಸಂಗೀತಾ ಭರಮಗೌಡ್ರ ಪ್ರಾರ್ಥಿಸಿದರು. ಕ್ಲಬ್ ಕಾರ್ಯದರ್ಶಿ ಪ್ರೊ.ವೀಣಾ ತಿರ್ಲಾಪೂರ ಸ್ವಾಗತಿಸಿದರು. ಶಿವಾಚಾರ್ಯ ಹೊಸಳ್ಳಿಮಠ ನಿರೂಪಿಸಿದರು. ಕವಿತಾ ಬೇಲೇರಿ ವಂದಿಸಿದರು.