ಆಶಾಕಿರಣದಡಿ ನೇತ್ರ ತಪಾಸಣೆ, ಸರ್ಜರಿಗೆ ಕ್ರಮ: ಸಚಿವ ಗುಂಡೂರಾವ್

| Published : Mar 08 2024, 01:46 AM IST

ಆಶಾಕಿರಣದಡಿ ನೇತ್ರ ತಪಾಸಣೆ, ಸರ್ಜರಿಗೆ ಕ್ರಮ: ಸಚಿವ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಜಿಲ್ಲೆಯೊಂದರಲ್ಲೇ ಈಗಾಗಲೇ 21 ಲಕ್ಷ ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ.‌ ಅವರಲ್ಲಿ‌ 75,200 ಜನರಿಗೆ ಸರ್ಜರಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಸೇರಿದಂತೆ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 1.12 ಕೋಟಿ ಜನರ ಕಣ್ಣು ಪರೀಕ್ಷೆ ಮಾಡುವ ಗುರಿಹೊಂದಿ‌ ಹಾಗೇ ಪರೀಕ್ಷೆ ಮಾಡಿದವರಿಗೆ ಈಗಾಗಲೇ 3.32 ಲಕ್ಷ ಕನ್ನಡಕ‌ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಹೇಳಿದರು.

ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಪ್ರೇರಣಾ‌ ಹಾಗೂ ಆಶಾಕಿರಣ ಕಾರ್ಯಕ್ರಮ ಉದ್ಘಾಟಿಸಿ‌ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯೊಂದರಲ್ಲೇ ಈಗಾಗಲೇ 21 ಲಕ್ಷ ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ.‌ ಅವರಲ್ಲಿ‌ 75,200 ಜನರಿಗೆ ಸರ್ಜರಿ ಮಾಡಲಾಗಿದೆ. ಇದಕ್ಕಾಗಿ ರು.61 ಕೋಟಿ ವ್ಯಯಿಸಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಯಾದಗಿರಿ ಸೇರಿದಂತೆ ಮತ್ತೆ ಎಂಟು ಜಿಲ್ಲೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸುವ ಆಲೋಚನೆ ಇದೆ. ಒಟ್ಟಾರೆ ರಾಜ್ಯದ ಪ್ರತಿಯೊಬ್ಬರು ಕಣ್ಣುಗಳ ರಕ್ಷಣೆಗೆ ಬೇಕಾಗುವ ತಪಾಸಣೆ ಹಾಗೂ ಸರ್ಜರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮುಟ್ಟು ಆಗುವ ಸ್ತ್ರೀಯರಿಗೆ ಪ್ರೇರಣಾ ಕಾರ್ಯಕ್ರಮದಲ್ಲಿ ಮುಟ್ಟಿನ ಕಪ್ ವಿತರಣೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದಿಸುತ್ತೇನೆ ಎಂದು ದಿನೇಶ ಗುಂಡೂರಾವ್, ಮುಟ್ಟಿನ ವಿಚಾರದಲ್ಲಿ ಮಡಿವಂತಿಕೆ ಇದೆ. ಆ ಮನಸ್ಥಿತಿ ಈಗ ಬದಲಾಗಬೇಕಿದೆ. ಮುಟ್ಟು ಎನ್ನುವುದು ಮಹಿಳೆಯರಿಗೆ ಪ್ರಕೃತಿ ನೀಡಿದ ಸಹಜ ಪ್ರಕ್ರಿಯೆಯಾಗಿದೆ. ಈ ವಿಚಾರದಲ್ಲಿ ಮುಚ್ಚಮರೆ ಮಾಡದೆ ಮಹಿಳೆಯರು ಮುಟ್ಟಿನ ಕಪ್ ಬಳಕೆ ಮಾಡಬೇಕು. ಶುಚಿ ಕಾರ್ಯಕ್ರಮದಡಿಯಲ್ಲಿ ಮಂಗಳೂರಿನಲ್ಲಿ ಸ್ಯಾನಟರಿ ಪ್ಯಾಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಮುಟ್ಟಿನ ವಿಚಾರದಲ್ಲಿ ಸರ್ಕಾರ ಒಂದು ದಿಟ್ಟ ಹೆಜ್ಜೆ ಇಟ್ಟು ಪ್ರೇರಣಾ ಕಾರ್ಯಕ್ರಮದಡಿಯಲ್ಲಿ ನೈರ್ಮಲ್ಯ ತಡೆಗಟ್ಟಿ ಸುಸ್ಥಿರವಾದ‌ ಕ್ರಮ ಕೈಗೊಳ್ಳಲು ಮುಟ್ಟಿನ ಕಪ್ ವಿತರಣೆಗೆ ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ‌. ಮುಟ್ಟಿನ ಘನತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮ ತೆಗೆದುಕೊಳ್ಳಲು ಈ ಕಾರ್ಯಕ್ರಮದ ಅಡಿಯಲ್ಲಿ ಕ್ರಮ ವಹಿಸಲಾಗುತ್ತಿದೆ‌. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದ ವತಿಯಿಂದ ರು. 1.57 ಕೋಟಿ ಹಾಗೂ ಕೆಕೆಆರ್ ಡಿಬಿ ವತಿಯಿಂದ ರು. 2.01 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 1.03 ಲಕ್ಷ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.

ವೇದಿಕೆಯ ಮೇಲೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ ಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಎಂ‌ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಕುಡಾ ಅಧ್ಯಕ್ಷ ಮಜರ್ ಖಾನ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ ಕಮೀಷನರ್ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಕಮೀಷನರ್ ಭುವನೇಶ್ ಪಾಟೀಲ, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಸೇರಿದಂತೆ ಹಲವರಿದ್ದರು.