ಧಾರವಾಡ:
ಯುವ ಕಾಂಗ್ರೆಸ್ ಮುಖಂಡ ಫೈರೋಜ್ ಪಠಾಣ ಹತ್ಯೆಯಾಗಿ ಎರಡು ತಿಂಗಳಾದರೂ ಪ್ರಮುಖ ಆರೋಪಿ ಇಸ್ಮಾಯಿಲ್ ತಮಟಗಾರ ಬಂಧಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ. ಪೊಲೀಸರು ಈ ಪ್ರಕರಣವನ್ನು ಪರಿಗಣಿಸದೆ ಇರುವುದರಿಂದ ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕೆಂದು ಹತ್ಯೆಯಾದ ಪಠಾಣ ಸಹೋದರ ಪರ್ವೇಜ್ ಪಠಾಣ ಆಗ್ರಹಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರ ನಿಷ್ಕಾಳಜಿಯಿಂದ ಬಂಧನದ ಭೀತಿಯಿಂದ ತಮಟಗಾರ ದೇಶ ಬಿಟ್ಟು ಹೋಗಿದ್ದಾರೆ. ಇಲಾಖೆಯು ನೆಪಕ್ಕಾಗಿ ನೋಟಿಸ್ ನೀಡಿದೆಯಾದರೂ ಅವರನ್ನು ಬಂಧಿಸಲು ಗಂಭೀರವಾದ ಪ್ರಯತ್ನ ಮಾಡುತ್ತಿಲ್ಲ. ಪ್ರಭಾವಿ ಮಾಜಿ ಸಚಿವರೊಬ್ಬರ ಪ್ರಭಾವದಿಂದಾಗಿ ಪೊಲೀಸ್ ಆಯುಕ್ತರು ಪ್ರಕರಣಕ್ಕೆ ಸ್ಪಂದಿಸುತ್ತಿಲ್ಲ ಎಂದು ಪರೋಕ್ಷವಾಗಿ ಜಮೀರ್ ಅಹಮದ್ ಮೇಲೆ ಪರ್ವೇಜ್ ಆರೋಪಿಸಿದರು.
ಮನೆಯಲ್ಲಿ ತಾಯಿ ಹಾಗೂ ಸಹೋದರಿ ಮಾತ್ರ ಇದ್ದು ತಮಗೆ ಜೀವ ಭಯ ಇದೆ. ಪೊಲೀಸರು ಭದ್ರತೆ ನೀಡಬೇಕು ಎಂದ ಅವರು, ಸಹೋದರನ ಹತ್ಯೆ ಪ್ರಕರಣದಲ್ಲಿ ಬಂಧಿತ ಮೈನುದ್ದೀನ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಯಲ್ಲಿದ್ದು, ಆತನಿಗೆ ಪೊಲೀಸರು ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕೊಡುತ್ತಿದ್ದಾರೆ. ಸಾಕ್ಷ್ಯ ನಾಶ ಮಾಡಲು ಆತನಿಗೆ ಎಲ್ಲ ರೀತಿಯ ಸಹಕಾರ ಸಿಗುತ್ತಿದೆ. ಇದರೊಂದಿಗೆ ಇಸ್ಮಾಯಿಲ್ ತಮಟಗಾರ ಹಾಗೂ ಬಂಧಿತ ಆರೋಪಿಗಳು ಜಾಮೀನಿಗೆ ಅರ್ಜಿ ಹಾಕಿದ್ದು, ನ್ಯಾಯಾಲಯ ಜಾಮೀನು ನೀಡಬಾರದು. ಒಂದು ವೇಳೆ ಜಾಮೀನು ಸಿಕ್ಕರೆ, ನಮಗೆ ಜೀವ ಭಯ ಇದ್ದು ಪೊಲೀಸರು ಭದ್ರತೆ ನೀಡಬೇಕೆಂದು ಆಗ್ರಹಿಸಿದರು.ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಈ ಕೊಲೆಯಲ್ಲಿ ಅಂಜುಮನ್ ಸಂಸ್ಥೆ ಎಳೆದು ತರಬೇಡಿ ಎಂದು ಹೇಳಿದ್ದಾರೆ. ಆದರೆ, ಫೈರೋಜ್ ಪಠಾಣ ಪ್ರಕರಣದಲ್ಲಿ ತಾವೆಲ್ಲೂ ಅಂಜುಮನ್ ಇಸ್ಲಾಂ ಸಂಸ್ಥೆ ಬಗ್ಗೆ ಆರೋಪ ಮಾಡಿಲ್ಲ. ಸಹೋದರನ ಹತ್ಯೆ ನಂತರ ಅಂಜುಮನ್ ವತಿಯಿಂದ ನಮ್ಮ ಮನೆಗೂ ಬಂದು ಸಾಂತ್ವನ ಸಹ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೊಲೆ ಪ್ರಕರಣದಲ್ಲಿ ತಮಟಗಾರ ಪಾತ್ರ ಇಲ್ಲ ಎಂದು ಹೇಳಿದ್ದಾರೆ. ಹತ್ಯೆಯಾದ ಫೈರೋಜ್ ಮದುವೆ ಸಮಯದಲ್ಲಿಯೇ ತಮಟಗಾರ ಅವರೊಂದಿಗೆ ಮಾತನಾಡಿದ ದೂರವಾಣಿ ಕರೆಯ ಸಾಕ್ಷಿ ಎಲ್ಲರ ಕಣ್ಮುಂದೆ ಇದೆ. ಇಷ್ಟಾಗಿಯೂ ಈ ಪ್ರಕರಣದಲ್ಲಿ ತಮಟಗಾರ ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
