ಜಾತ್ರೆ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ

| Published : Feb 26 2025, 01:01 AM IST

ಜಾತ್ರೆ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಬಸವ ರಾಮನಂದ ಸ್ವಾಮೀಜಿ ಜಾತ್ರೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು.

ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಜಾತ್ರಾ ಮಹೋತ್ಸವದಲ್ಲಿ ಡಾ.ಬಸವ ರಾಮನಂದ ಶ್ರೀಕನ್ನಡಪ್ರಭ ವಾರ್ತೆ ಹಿರಿಯೂರು

ಸಮಾಜದಲ್ಲಿ ನಮ್ಮ ಸಮಾಜ ದಾನ ಕೊಟ್ಟಿದ್ದಕ್ಕಿಂತ ದಂಡ ಕೊಟ್ಟಿದ್ದೇ ಜಾಸ್ತಿ. ದಾನ ಧನ ಶುದ್ಧಿ, ಧ್ಯಾನ ಮನಶುದ್ದಿ, ಕಾಯಕ ದೇಹ ಶುದ್ದಿ ಮಾಡುತ್ತದೆ. ಈ ಮೂರು ಶುದ್ದಿಗಳನ್ನು ಆಗಾಗ ಎಲ್ಲರೂ ಮಾಡಿಕೊಳ್ಳಬೇಕು ಎಂದು ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಬಸವ ರಾಮನಂದ ಸ್ವಾಮೀಜಿ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಠದ ಭಕ್ತರ ಜೊತೆ ಸುದ್ದಿಗೋಷ್ಠಿ ನಡೆಸಿ, 51ನೇ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಜಾತ್ರೆಗಳು ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ. ಮಠದಲ್ಲಿ ಮಾರ್ಚ್ 1ರಿಂದ ಜಾತ್ರೆ ಆರಂಭವಾಗಲಿದ್ದು ಇದೇ ಮೊದಲ ಬಾರಿಗೆ ಬುಡಕಟ್ಟು ಶೈಲಿಯ ರಾಜ್ಯ ಮಟ್ಟದ ಜಾನಪದೋತ್ಸವ ಮತ್ತು ಕವಿ ಕಾವ್ಯ ಸಮ್ಮೇಳನ ನಡೆಯಲಿದೆ. ಮಾರ್ಚ್ 1 ರಿಂದ 7ರ ವರೆಗೆ ಸಿದ್ಧಯೋಗಾನಂದಶ್ರೀ ಕ್ರಿಕೆಟ್ ಕಪ್, ವಾಲಿಬಾಲ್, ಕಬ್ಬಡಿ ಗುಂಡು ಎಸೆತ, ಓಟದ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾಕೂಟಗಳ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದರು.

ಮಾ.8 ರಂದು ಗದ್ದುಗೆ ಪೂಜಾ ಕೈಂಕರ್ಯ, ರಾಜ್ಯ ಮಟ್ಟದ ಜಾನಪದೋತ್ಸವ ಮತ್ತು ಕವಿ ಕಾವ್ಯ ಸಮ್ಮೇಳನ, ರಾತ್ರಿ 8 ಗಂಟೆಗೆ ಕುರುಕ್ಷೇತ್ರ ನಾಟಕ, ಮಾ.9 ರಂದು ಮಧ್ಯಾಹ್ನ 1.30ಕ್ಕೆ ಶ್ರೀ ವನಕಲ್ಲು ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಜರುಗಲಿದೆ. ಅಂದಿನ ದಿನವೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ವನಕಲ್ಲು ಶ್ರೀ ಪ್ರಶಸ್ತಿ, ಜಗಜ್ಯೋತಿ ಪ್ರಶಸ್ತಿ, ವಿಶ್ವಜೋತಿ ಪ್ರಶಸ್ತಿ, ಶ್ರೀ ಬಾಲಗಂಗಾಧರನಾಥ ನಿರ್ಮಲ ಜ್ಯೋತಿ ಪ್ರಶಸ್ತಿ ಹಾಗೂ ಶರಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ಸಂಪೂರ್ಣ ರಾಮಾಯಣ ನಾಟಕ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಶ್ರೀ ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಚಿತ್ರದುರ್ಗದ ಬಸವಪ್ರಭು ಶ್ರೀಗಳು, ಹೊಸದುರ್ಗದ ಶಾಂತವೀರ ಶ್ರೀಗಳು ಹಾಗೂ ರಾಜ್ಯದ ವಿವಿಧ ಮಠಾಧೀಶರು ಸೇರಿದಂತೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ರಾಜ್ಯ ಸಚಿವರಾದ ಡಾ.ಜಿ . ಪರಮೇಶ್ವರ್, ಕೆಎನ್. ರಾಜಣ್ಣ ಮುಂತಾದ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ.

ಶ್ರೀ ಮಠವು ಸರ್ವಧರ್ಮಿಯರ ಮಠವಾಗಿದ್ದು ಹಿರಿಯೂರು, ಚಿತ್ರದುರ್ಗ ಜಿಲ್ಲೆಯ ಹಾಗೂ ಇನ್ನಿತರ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಅಭಿನಂದನ್ ಮಾತನಾಡಿ, ಸ್ವಾಮೀಜಿಯವರು ಮಿನಿ ಗ್ರಂಥಾಲಯ ಇದ್ದಂತೆ. ಶ್ರೀಗಳ ಮಾರ್ಗದರ್ಶನದಂತೆ ನಾವೆಲ್ಲರೂ ನಡೆಯೋಣ. ಶ್ರೀಗಳ ಆಶೀರ್ವಾದದಿಂದ ಅನೇಕ ರೀತಿಯ ಮನಸುಗಳು ಪರಿವರ್ತನೆ ಹೊಂದುತ್ತವೆ. ತಾಲೂಕಿನಿಂದ ಅತೀ ಹೆಚ್ಚಿನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಈ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ವಿಶ್ವನಾಥ್, ನಗರಸಭೆ ಸದಸ್ಯರಾದ ಶಿವರಂಜನಿ ಯಾದವ್, ರತ್ನಮ್ಮ , ಚಿತ್ರಜಿತ್ ಯಾದವ್, ವೀರ ಕರಿಯಪ್ಪ, ಪ್ರಭು ಯಾದವ್, ನಾಗೇಂದ್ರ, ವೇದಮೂರ್ತಿ, ಕೇಶವಮೂರ್ತಿ, ಗೋಪಿ ಯಾದವ್, ಗೋವಿಂದಪ್ಪ, ರಂಗಯ್ಯ, ರಂಗಸ್ವಾಮಿ, ಚಿತ್ರಲಿಂಗಪ್ಪ, ಬಿಡಿ. ಬಸವರಾಜ್, ನಾಗಣ್ಣ, ಚಿತ್ತಯ್ಯ, ಪಾಂಡುರಂಗಯ್ಯ, ಉಪನ್ಯಾಸಕ ನಾಗಣ್ಣ ಮುಂತಾದವರು ಉಪಸ್ಥಿತರಿದ್ದರು.