ಸಾರಾಂಶ
ದಾವಣಗೆರೆ: ಅಡಕೆ ತೋಟದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ರೈತನ ಮೃತ ದೇಹ ಪತ್ತೆಯಾದ ಘಟನೆ ಚನ್ನಗಿರಿ ತಾಲೂಕು ವೀರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ವೀರಾಪುರ ಗ್ರಾಮದ ತಿಮ್ಮಪ್ಪ ಮೃತರೈತ.
ಸಾಲ ಮಾಡಿ ಸುಮಾರು 4.26 ಎಕರೆ ದರಖಾಸ್ತು ಜಮೀನನ್ನು ಖರೀದಿಸಿದ್ದ ತಿಮ್ಮಪ್ಪ ಜತನದಿಂದ ಅಡಕೆ ಗಿಡಗಳನ್ನು ಬೆಳೆಸಿದ್ದರು. ಈ ಜಮೀನಿನ ಮೂಲ ಮಾಲೀಕ ಬೇರೆಯವರಿಗೆ ಜಮೀನು ಮಾರಾಟ ಮಾಡಿದ್ದನು. ಬಳಿಕ ಅದೇ ಜಮೀನನ್ನು ಮೂರನೇ ವಾರಸುದಾರನಾಗಿ ಮೂಡಲಪ್ಪ ಎಂಬಾತ ಖರೀದಿಸಿದ್ದು, ಈತನ ವಿರುದ್ಧ ಪಕ್ಕದ ಜಮೀನಿನ ವ್ಯಕ್ತಿ ಕೇಸ್ ದಾಖಲಿಸಿದ್ದರು. ಈ ನಡುವೆಯೂ ವೀರಾಪುರದ ತಿಮ್ಮಪ್ಪ ಅವರು ಮೂಡಲಪ್ಪನಿಂದ ಜಮೀನು ಖರೀದಿಸಿ, ಆಸ್ಥೆಯಿಂದ ಅಡಕೆ ತೋಟ ಬೆಳೆಸಿದ್ದರು. ಆದರೆ, ತಿಮ್ಮಪ್ಪ ಖರೀದಿಸಿದ ಜಮೀನಿನ ಪಕ್ಕದ ವ್ಯಕ್ತಿಯು ಮೂರನೇ ವಾರಸುದಾರನಾಗಿದ್ದ ಮೂಡಲಪ್ಪ ವಿರುದ್ಧ ಕೇಸ್ ದಾಖಲಿಸಿದ್ದರು.ಸಾಲ ಮಾಡಿ ಜಮೀನು ಖರೀದಿಸಿ, ಅಡಕೆ ಗಿಡಗಳನ್ನು ಬೆಳೆಸಿದ್ದ ತೋಟ ಎಲ್ಲಿ ಕೈ ತಪ್ಪುವುದೋ ಎಂಬ ಆತಂಕದಲ್ಲಿ ತಿಮ್ಮಪ್ಪ ತಾನೇ ಬೆಳೆಸಿದ್ದ ಅಡಕೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಆಧಾರವಾಗಿದ್ದ ತಿಮ್ಮಪ್ಪನನ್ನು ಕಳೆದುಕೊಂಡ ಕುಟುಂಬ ವರ್ಗದ ರೋದನ ಮುಗಿಲು ಮುಟ್ಟಿತ್ತು.
ನ್ಯಾಯಕ್ಕಾಗಿ ಸಂಬಂಧಿಗಳ ಆಗ್ರಹ:ತಿಮ್ಮಪ್ಪನವರ ಸಾವಿನ ಬಗ್ಗೆ ತಮಗೆ ಅನುಮಾನವಿದೆ. ಮುಂಚೆ ತಮ್ಮ ಹೆಸರಿಗೆ ಬಂದ ಜಮೀನು ಇದೀಗ ಬೇರೆಯವರ ಹೆಸರಿಗೆ ಹೋಗಲು ಏನು ಕಾರಣ? ತಿಮ್ಮಪ್ಪ ದರಖಾಸ್ತು ಲ್ಯಾಂಡ್ ಗ್ರ್ಯಾಂಟ್ ಆಗಿದ್ದ ಜಮೀನು ಖರೀದಿಸಿದ್ದರು. ಪಿಟಿಸಿಎಲ್ ಕಾಯ್ದೆ ಬಗ್ಗೆ ರೈತರಿಗೆ ಗೊತ್ತಿರುವುದಿಲ್ಲ. ತಿಮ್ಮಪ್ಪನದು ಆತ್ಮಹತ್ಯೆಯೋ ಅಥವಾ ಕೊಲೆ ಮಾಡಲಾಗಿದೆಯೋ ಎಂಬ ಅನುಮಾನ ಬಗೆಹರಿಯಬೇಕು. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದೇವೆ ಎನ್ನುತ್ತಾರೆ ಸಂಬಂಧಿ ಹಾಲೇಶ.
- - --18ಕೆಡಿವಿಜಿ6: ರೈತ ತಿಮ್ಮಪ್ಪ ಮೃತಪಟ್ಟಿರುವುದು.