ಸಾರಾಂಶ
ಕಳೆದ 15 ದಿನಗಳಿಂದ ವಿವಿಧ ಮಾರುಕಟ್ಟೆಗಳಲ್ಲಿ ಕ್ರೇಟ್ ಒಂದಕ್ಕೆ ₹200ರಿಂದ ₹300ಕ್ಕೆ ಮಾರಾಟ ಮಾಡಿದ್ದರು.
ಕೊಟ್ಟೂರು: ಟೊಮ್ಯಾಟೊ ಹಣ್ಣಿನ ಬೆಲೆ ದಿಢೀರನೇ ಕುಸಿತ ಕಂಡಿರುವುದರಿಂದ ಜಿಗುಪ್ಸೆಗೊಂಡ ತಾಲೂಕಿನ ನಿಂಬಳಗರೆ ರೈತ, ತಾನು ಬೆಳೆದ ಟೊಮ್ಯಾಟೊವನ್ನು ರಸ್ತೆ ಬದಿ ಸುರಿದು ಆಕ್ರೋಶ ಹೊರಹಾಕಿದ್ದಾನೆ.
ನಿಂಬಳಗೆರೆ ಗ್ರಾಮದ ಗಾಬರಿ ಕಾಡಪ್ಪ ತಮ್ಮ 3 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದರು. ಕಳೆದ 15 ದಿನಗಳಿಂದ ವಿವಿಧ ಮಾರುಕಟ್ಟೆಗಳಲ್ಲಿ ಕ್ರೇಟ್ ಒಂದಕ್ಕೆ ₹200ರಿಂದ ₹300ಕ್ಕೆ ಮಾರಾಟ ಮಾಡಿದ್ದರು. ಆದರೆ ಮಂಗಳವಾರ ಹರಪನಹಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಒಂದು ಕ್ರೇಟ್ ಬೆಲೆ ಕೇವಲ ₹30ರಿಂದ ₹50ಕ್ಕೆ ಕೇಳಿದ್ದಾರೆ. ಇದರಿಂದ ಬೇಸತ್ತ ಕಾಡಪ್ಪ ಹಣ್ಣನ್ನು ವಾಪಸ್ ತಂದು ದನ ಕರುಗಳು, ಕುರಿಗಳು ತಿನ್ನಲಿ ಎಂದು ತನ್ನ ಜಮೀನಿನ ಬಳಿಯೇ ರಸ್ತೆಪಕ್ಕ ಸುರಿದ್ದಾರೆ.ಟೊಮ್ಯಾಟೊ ಹಣ್ಣು ಬಿಡಿಸಲು ಮಹಿಳಾ ಕೂಲಿ ಕಾರ್ಮಿಕರಿಗೆ ₹200, ಪುರುಷ ಕಾರ್ಮಿಕರಿಗೆ ₹500 ನೀಡಬೇಕು. ಇದರ ಜೊತೆಗೆ ವಾಹನ ಬಾಡಿಗೆ ಸೇರಿ ಹಲವು ಖರ್ಚುಗಳಿವೆ. ಇಂತಹ ಬೆಲೆಯಲ್ಲಿ ಇವನ್ನೆಲ್ಲ ಹೇಗೆ ನಿಭಾಯಿಸಬೇಕು ಎಂದು ಪ್ರಶ್ನಿಸುವ ಕಾಡಪ್ಪ, ಹೀಗೆ ದಿಢೀರ್ ಬೆಲೆ ಕುಸಿತವಾದರೆ ರೈತರು ಬದುಕುವುದು ಹೇಗೆ ಎಂದು ಸಂಕಟ ವ್ಯಕ್ತಪಡಿಸಿದ್ದಾನೆ.