ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದ್ದು, ಗೊಬ್ಬರಕ್ಕಾಗಿ ರೈತ ವರ್ಗ ಪರಿತಪಿಸುವಂತಾಗಿದೆ.

ಕೊಪ್ಪಳ: ನಗರದ ಗದಗ ರಸ್ತೆಯ ಟಿಎಪಿಎಂಎಸ್ ಆವರಣದಲ್ಲಿ ಗೊಬ್ಬರಕ್ಕಾಗಿ ರೈತರ ಗಲಾಟೆ ಜರುಗಿದೆ. ಸರದಿ ಸಾಲಿನಲ್ಲಿ ನಿಂತು ರೈತರು ಗೊಬ್ಬರಕ್ಕಾಗಿ ಪರದಾಡಿದರು.

ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆಗೆ ಸಜ್ಜುಗೊಂಡಿದ್ದಾರೆ. ಸಮರ್ಪಕವಾಗಿ ಗೊಬ್ಬರ ಸಿಗುವುದಿಲ್ಲ ಎಂದು ಮಂಗಳವಾರ ಬೆಳ್ಳಂಬೆಳಗ್ಗೆ 4 ಗಂಟೆಯಿಂದಲೇ ರೈತರು ಸರದಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನ 12 ಗಂಟೆಯಾದರೂ ರೈತರಿಗೆ ಗೊಬ್ಬರ ಸಿಗಲಿಲ್ಲ. ಅಧಿಕಾರಿಗಳಿಂದ ಸರಿಯಾದ ಉತ್ತರವೂ ಸಿಗುತ್ತಿಲ್ಲ, ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು.

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದ್ದು, ಗೊಬ್ಬರಕ್ಕಾಗಿ ರೈತ ವರ್ಗ ಪರಿತಪಿಸುವಂತಾಗಿದೆ. ಯೂರಿಯಾ ಕೊರತೆ ಹಿನ್ನೆಲೆಯಲ್ಲಿ ಒರ್ವ ರೈತನಿಗೆ ಒಂದೇ ಚೀಲ ಯೂರಿಯಾ ಗೊಬ್ಬರ ನೀಡಲಾಗುತ್ತಿತ್ತು. ಇದಕ್ಕೂ ಸಹ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಒಂದು ಎಕರೆಗೆ ಒಂದು ಚೀಲ ಯಾತಕ್ಕೂ ಸಾಲದು. ಅಧಿಕಾರಿಗಳು ಇದನ್ನು ಬದಲಾಯಿಸಬೇಕು ಎಂದು ಕೋರಿದರು.

ಇನ್ನು ಐದಾರು ಗಂಟೆ ಸರತಿ ಸಾಲಿನಲ್ಲಿ ನಿಲ್ಲಲು ಆಗದೇ ವಯೋವೃದ್ಧರು ಪರದಾಡಿದರು. ಸೋಮವಾರ ಗೊಬ್ಬರ ಕೊಡುವುದಿಲ್ಲ ಎಂದು ಹೇಳಿದ್ದ ಅಧಿಕಾರಿಗಳು ಸಂಜೆ ಗೊಬ್ಬರ ಹಂಚಿಕೆ ಮಾಡಿರುವುದನ್ನು ಸಹ ರೈತರು ಖಂಡಿಸಿದರು. ರೈತರ ಹಾಗೂ ಅಧಿಕಾರಿಗಳ ನಡುವೆ ಗದ್ದಲದ ವಾತಾವರಣ ಜರುಗಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಿಗೊಳಿಸಿದರು.