ಸಾರಾಂಶ
ಬೆಂಗಳೂರು ಮತ್ತು ಮೈಸೂರು ನಡುವೆ ನೈಸ್ ಎಕ್ಸ್ಪ್ರೆಸ್ ವೇ ಅಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಖಂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಮತ್ತು ಮೈಸೂರು ನಡುವೆ ನೈಸ್ ಎಕ್ಸ್ಪ್ರೆಸ್ ವೇ ಅಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಖಂಡಿಸಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬೆಂಗಳೂರು-ಮೈಸೂರು ನಡುವೆ ಈಗಾಗಲೇ ದಶಪಥ ಹೆದ್ದಾರಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ನೈಸ್ ರಸ್ತೆ ಅಪ್ರಸ್ತುತವಾಗಿದೆ. ಮೂಲ ಒಪ್ಪಂದ ಉಲ್ಲಂಘನೆ, ದಬ್ಬಾಳಿಕೆ, ಭ್ರಷ್ಟಾಚಾರದ ಮೂಲಕ ರೈತರ ಭೂಮಿ ಸ್ವಾಧೀನ ಸೇರಿದಂತೆ ಹಲವು ಅಕ್ರಮಕ್ಕೆ ಸುಪ್ರೀಂ ಕೋರ್ಟ್ ಹಾಗೂ ಸದನ ಸಮಿತಿಯಿಂದ ನೈಸ್ ಕಂಪನಿ ಛೀಮಾರಿಗೆ ಒಳಗಾಗಿದೆ. ಇದರ ಪರ ಶಿವಕುಮಾರ್ ಅವರು ವಕಾಲತ್ತು ವಹಿಸುವುದು ರೈತ ದ್ರೋಹದ ಕೆಲಸವಾಗಿದೆ ಎಂದು ಟೀಕಿಸಿದ್ದಾರೆ.
ಶಿವಕುಮಾರ್ ಅವರು ತಕ್ಷಣ ತಮ್ಮ ಮಾತನ್ನು ವಾಪಸ್ ಪಡೆದು ರೈತ ಸಮುದಾಯದ ಕ್ಷಮೆ ಕೋರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯ ಸದನ ಸಮಿತಿಯ ಶಿಪಾರಸುಗಳನ್ನು ಜಾರಿ ಮಾಡಬೇಕು, ಬಿಎಂಐಸಿ ಯೋಜನೆ ರದ್ದುಪಡಿಸಬೇಕು, ಹೆಚ್ಚುವರಿ ಭೂಮಿಯನ್ನು ನೈಸ್ ಕಂಪನಿಯಿಂದ ವಾಪಸ್ ಪಡೆಯುವ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.