ಸಾರಾಂಶ
- ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವ । ಸರ್ಕಾರಕ್ಕೆಮನವಿ
- - - ಕನ್ನಡಪ್ರಭ ವಾರ್ತೆ ಜಗಳೂರುತಾಲೂಕಿನ ಗೌಡಗೊಂಡನಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚನಹಳ್ಳಿ ಮಂಜುನಾಥ್ ಬಣ) ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಚೇರಿ ಮುಂಭಾಗ ಜಮಾಯಿಸಿದ್ದ ರೈತರು ಮಳೆಯನ್ನು ಲೆಕ್ಕಿಸದೇ ಜಿಟಿ ಜಿಟಿ ಹನಿಯಲ್ಲೂ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಗೌಡಗೊಂಡನಹಳ್ಳಿ ಅರಣ್ಯ ಪ್ರದೇಶದ ಸ.ನಂ. ೫೧, ೫೨, ೫೩ ಸರ್ಕಾರಿ ಭೂಮಿಯಲ್ಲಿ ರೈತರು ೪೦ ವರ್ಷಗಳಿಂದ ಸಾಗುವಳಿ ಮಾಡುತ್ತ, ಜೀವನ ನಡೆಸುತ್ತಿದ್ದಾರೆ. ಅಂದಿನಿಂದಲೂ ಇಂದಿನವರೆಗೂ ಸಾಧೀನಾನುಭವದಲ್ಲಿರುವ ಜಮೀನುಗಳನ್ನು ಸಕ್ರಿಯಗೊಳಿಸಿ, ಹಕ್ಕುಪತ್ರ ನೀಡುವಂತೆ ತಾಲೂಕು ಕಚೇರಿಗೆ ಈಗಾಗಲೇ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿರುವುದನ್ನು ಸಕ್ರಮೀಕರಣಗೊಳಿಸಿ ಕೊಡಲು ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನಮೂನೆ-ಎ ಅರಣ್ಯ ಭೂಮಿಯ ಹಕ್ಕುಗಳ ಕ್ಲೇಮಿನ ನಮೂನೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದರು.
ಸರ್ಕಾರಿ ಭೂಮಿಯನ್ನೇ ನಂಬಿಕೊಂಡು ಹತ್ತಾರು ಬಡ ಕುಟುಂಬಗಳು ಬದುಕುತ್ತಿವೆ. ಆದರೆ, ಅರಣ್ಯಾಧಿಕಾರಿಗಳು ಒಕ್ಕಲೆಬ್ಬಿಸಿ ರೈತರಿಗೆ ನೋಟಿಸ್ ನೀಡಿ, ಅನ್ಯಾಯ ಮಾಡಲು ಮುಂದಾಗಿದ್ದಾರೆ. ಜನಸಂಖ್ಯೆ ಬೆಳೆದಂತೆಲ್ಲಾ ಒಂದು ಇಡಿ ಭೂಮಿ ಬೇಡಿಕೆ ಹೆಚ್ಚಾಗಿದೆ. ಇದೀಗ ಉಳುಮೆ ಮಾಡುವುದನ್ನು ನಿಲ್ಲಿಸಿ, ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು ಎಚ್ಚರಿಕೆ ನೀಡಿದರು.ಅರಣ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಅರಣ್ಯ ಸಂರಕ್ಷಣೆ ನಮ್ಮ ಕರ್ತವ್ಯ. ಇಲಾಖೆ ಆದೇಶದಂತೆ ಕೆಲಸ ಮಾಡುತ್ತೇವೆ, ಯಾರಿಗೂ ನೋವುಂಟು ಮಾಡುವುದು ಉದ್ದೇಶವಿಲ್ಲ. ಅರಣ್ಯದ ವ್ಯಾಪ್ತಿಯ ಜಾಗ ಒತ್ತುವರಿ ಆಗಿದ್ದರೆ ತೆರವು ಕಾರ್ಯಾಚರಣೆ ಅನಿವಾರ್ಯ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕಸವ್ವನಹಳ್ಳಿ ನಾಗರಾಜ್, ಚಿಕ್ಕ ಉಜ್ಜಯಿನಿ ಕುಮಾರ್, ಹನುಮಂತಪ್ಪ, ಜ್ಯೋತಿಕುಮಾರ್, ಪರಶುರಾಮ, ಕೆಂಚಮ್ಮ, ಕರಿಬಸಮ್ಮ, ಬಸಮ್ಮ, ಕಮಲಮ್ಮ, ಜಿಲ್ಲಾ ಕಾರ್ಯದರ್ಶಿಸತೀಶ್ ಸೇರಿದಂತೆ 40ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.- - -
-05ಜೆ.ಎಲ್.ಆರ್.3:ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಾಗುವಳಿ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ನೀಡಿದ್ದನ್ನು ಖಂಡಿಸಿ ಪಟ್ಟಣದ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.