ಸಾರಾಂಶ
ಅನೇಕ ವಿದ್ಯಾವಂತರು ಇಂದು ಕೃಷಿಯತ್ತ ಒಲವು ತೋರಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ನಿಟ್ಟಿನಲ್ಲಿ ಕೃಷಿ ವಿವಿ ಅಭಿವೃಧ್ಧಿಪಡಿಸುತ್ತಿರುವ ನೂತನ ತಳಿಗಳು, ಕೃಷಿ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿಸಖಿಯರು ಶ್ರಮಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಕೃಷಿ ಕ್ಷೇತ್ರವು ಇಂದು ರೈತರ ಜೀವನಮಟ್ಟವನ್ನು ಸುಧಾರಿಸಿ ಅವರ ಆದಾಯವನ್ನು ಹೆಚ್ಚಿಸುತ್ತಿದೆ. ಆದ್ದರಿಂದ ನವೀಕರಣಗೊಂಡ ಕೃಷಿ ತಾಂತ್ರಿಕತೆಗಳಿಗೆ ರೈತರನ್ನು ಓಲೈಸಬೇಕಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ಕೆ.ಬಿ. ಪ್ರಭುಸ್ವಾಮಿ ತಿಳಿಸಿದರು.ಮೈಸೂರು ತಾಲೂಕಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತುಜೀವನೋಪಾಯ ಇಲಾಖೆ, ಕೃಷಿ ವಿವಿ ಸಹಯೋಗದೊಂದಿಗೆ ಕೃಷಿ ಸಖಿಯರಿಗಾಗಿ 3ನೇ ಮಾಡ್ಯೂಲ್ ನ 6 ದಿನಗಳ ಮೊದಲನೇ ತಂಡದ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತಾನಾಡಿದರು.ಅನೇಕ ವಿದ್ಯಾವಂತರು ಇಂದು ಕೃಷಿಯತ್ತ ಒಲವು ತೋರಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ನಿಟ್ಟಿನಲ್ಲಿ ಕೃಷಿ ವಿವಿ ಅಭಿವೃಧ್ಧಿಪಡಿಸುತ್ತಿರುವ ನೂತನ ತಳಿಗಳು, ಕೃಷಿ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿಸಖಿಯರು ಶ್ರಮಿಸಬೇಕು ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ಮುಂದಾಳು ಹಾಗೂ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸಿ. ರಾಮಚಂದ್ರ ಮಾತನಾಡಿ, ಕೃಷಿಸಖಿಯರಿಗಾಗಿ ಒಟ್ಟು 9 ಮಾಡ್ಯೂಲ್ ಗಳಲ್ಲಿ 6 ದಿನಗಳ ತರಬೇತಿ ನಡೆಯಲಿದ್ದು, ಇದರಿಂದ ಕೃಷಿಸಖಿಯರಿಗೆ ಹೆಚ್ಚು ಜ್ಞಾನಾರ್ಜನೆ ಒದಗಲಿದೆ ಎಂದರು.ಮಂಡ್ಯ ವಿಸಿ ಫಾರಂ ಬೀಜ ವಿಭಾಗದ ಮುಖ್ಯಸ್ಥ ಡಾ.ಎ.ಬಿ. ನಾರಾಯಣರೆಡ್ಡಿ ಉಪನ್ಯಾಸ ನೀಡಿದರು. ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಎನ್. ಪುಷ್ಪಾ, ಡಾ. ಶಿವಕುಮಾರ್, ಸಾವಯವ ಕೃಷಿ ಸಂಶೋಧನಾ ಕೇಂದ್ರದ ತಾಂತ್ರಿಕಾಧಿಕಾರಿ ಡಾ.ಜಿ.ವಿ. ಸುಮಂತ್ ಕುಮಾರ್ ಇದ್ದರು.