ಮುಂಡರಗಿ:
ಮಣ್ಣಿನ ಆರೋಗ್ಯಕ್ಕಾಗಿ ರೈತರು ಸಮತೋಲನದಿಂದ ಗೊಬ್ಬರಗಳನ್ನು ಬಳಸಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.ಇತ್ತೀಚೆಗೆ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಧರ್ತಿ ಮಾತಾ ಬಚಾವೋ ಆಂದೋಲನದಲ್ಲಿ ಮಾತನಾಡಿದರು.
ಕೇವಲ ಯೂರಿಯಾ, ಡಿಎಪಿ ಗೊಬ್ಬರಗಳಿಗೆ ಸೀಮಿತವಾಗದೆ, ಕಾಂಪ್ಲೆಕ್ಸ್ ಗೊಬ್ಬರಗಳು ಹಾಗೂ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಹುಳಿ ಮಜ್ಜಿಗೆ ಸಮತೋಲನವಾಗಿ ಉಪಯೋಗಿಸುವಂತೆ ರೈತರಿಗೆ ಸಲಹೆ ನೀಡಿದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ಬೀಜೋಪಚಾರ ಮಾಡುವುದರಿಂದ ಬೆಳೆಗಳಲ್ಲಿ ಕಂಡುಬರುವ ಬೇರುಕೊಳೆ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಅತಿಯಾದ ಯೂರಿಯಾ ಬಳಕೆಯಿಂದ ತರಕಾರಿ, ಹಣ್ಣು, ಧಾನ್ಯಗಳಲ್ಲಿ ನೈಟ್ರೇಟ್ ಅಂಶ ಹೆಚ್ಚಾಗುತ್ತದೆ. ಇವು ದೀರ್ಘಾವಧಿಯಲ್ಲಿ ಮಾನವನಿಗೆ ವಿಷಕಾರಿಯಾಗಿ ಪರಿಣಮಿಸಿ ಹೊಟ್ಟೆನೋವು, ವಾಂತಿ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದರು.
ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಾರಜನಕ ಕರಗಿ ಜಲಾಶಯಗಳಿಗೆ ಸೇರಿ ಜಲಚರಗಳಿಗೆ ಮಾರಕವಾಗುವುದಲ್ಲದೆ, ಮಕ್ಕಳಲ್ಲಿ ಬ್ಲೂ ಬೇಬಿ ಸಿಂಡ್ರೋಮ್ನಂಥ ಮಾರಕ ರೋಗಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ತಾಂತ್ರಿಕ ಕೃಷಿ ಅಧಿಕಾರಿ ಶಿವಮೂರ್ತಿ ನಾಯ್ಕ, ತಾಲೂಕು ತಾಂತ್ರಿಕ ವ್ಯವಸ್ಥಾಪಕ(ಆತ್ಮ) ಗೌರಿಶಂಕರ ಸಜ್ಜನರ ಹಾಗೂ ಬೆಣ್ಣಿಹಳ್ಳಿ ಗ್ರಾಮದ ರೈತರಾದ ಗುರುರಾಜ ಡಂಬಳ, ಮಲ್ಲಪ್ಪ ಹೊಸಕುರುಬರ, ಈರಪ್ಪ ಚವಡಿ, ದೇವೇಂದ್ರಪ್ಪ ಶಿಂಗಟರಾಯನಕೇರಿ, ಮಾಂತೇಶ ಹಳ್ಳಿಕೇರಿ, ದೇವಪ್ಪ ಅಜ್ಜಪ್ಪನವರ, ಭೀಮಣ್ಣ ತಳವಾರ, ಕರಿಯಪ್ಪ ಡೊಳ್ಳಿನ ಹಾಗೂ ರೈತ ಮಹಿಳೆಯರು ಪಾಲ್ಗೊಂಡಿದ್ದರು.