ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ । ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ಪರಶುರಾಂಪುರದಲ್ಲಿ ಸಭೆ ಸೇರಿ ಸರ್ಕಾರದ ನೂತನ ರೈತ ವಿರೋಧಿ ವಿದ್ಯುತ್ ಖಾಸಗೀಕರಣಕ್ಕೆ ವಿರೋಧ ವ್ಯಕ್ತ ಪಡಿಸಿ ಹಕ್ಕೊತ್ತಾಯ ಮಂಡಿಸಲಾಯಿತು.ಇದೇ ಸಂದರ್ಭದಲ್ಲಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕು. ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ಬಯಲು ಸೀಮೆಯ ರೈತರ ನೀರಾವರಿ ಬೆಳೆಗಳಿಗೆ 2 ಬೆಳೆಗಳಿಗೆ ನೀರು ಹರಿಸಬೇಕು. ರೈತ ಬೆಳೆದ ದವಸ, ಧಾನ್ಯಗಳನ್ನು ಸರ್ಕಾರವೇ ವೈಜ್ಞಾನಿಕ ಬೆಲೆಯಲ್ಲಿ ಖರೀದಿಸಲು ಕ್ರಮ ಕೈಗೊಳ್ಳಬೇಕು. ರೈತರು ಬೆಳೆದ ಹಣ್ಣು ಹಂಪಲುಗಳನ್ನು ವಿದೇಶಗಳಲ್ಲಿ ಮಾರಾಟ ಮಾಡಲು ಮಾರುಕಟ್ಟೆ ಸೃಷ್ಟಿಸಬೇಕು. ಕೃಷಿ ವಲಯವನ್ನು ಕೈಗಾರಿಕಾ ವಲಯ ಎಂದು ಘೋಷಿಸಿ ಮಾರುಕಟ್ಟೆ ಸೃಷ್ಟಿಸಿ ವೈಜ್ಞಾನಿಕ ಬೆಲೆ ನಿಗದಿ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ರೈತರು ಬೆಳೆದ ಬೆಳೆಗಳನ್ನು ಖರೀದಿಸುವಂತೆ ಕ್ರಮ ಕೈಗೊಳ್ಳಬೇಕು.
ಇಷ್ಟೆಲ್ಲಾ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಇಂತಹ ಬೇಡಿಕೆಗಳಿಗೆ ಮನ್ನಣೆ ನೀಡಬೇಕು. ರೈತರಿಗೆ ಮಾರಕವಾಗುವ ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸಲಾಗುವುದು ಎಂದು ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಹಿರಿಯ ಹೋರಾಟಗಾರ ಸೋಮಗುದ್ದು ರಂಗಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ರೈಚ ಚಳವಳಿಯಲ್ಲಿ ರಂಗಸ್ವಾಮಿ ಅವರ ಸೇವೆ ಅನನ್ಯವಾದುದು. ರೈತ ಕುಲಕ್ಕಾಗಿ ಅವಿರತ ಹೋರಾಡಿದ ಜೀವಕ್ಕೆ ಹಿರಿಯ ಹೋರಾಟಗಾರರಿಂದಲೇ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮಲ್ರಹಳ್ಳಿ ರವಿಕುಮಾರ್, ಕೆ.ಸಿ. ಹೊರಕೇರಪ್ಪ, ಚಿಕ್ಕಣ್ಣ, ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ, ವೆಂಕಟರಣಪ್ಪ, ರುದ್ರಮುನಿಯಪ್ಪ, ಶಶಿಕಲ,ಹನುಮಂತರಾಯ, ಹಂಪಣ್ಣ ಮತ್ತಿತರರು ಇದ್ದರು.