ಸಾರಾಂಶ
ಬಿಸಿಲಿನಿಂದ ಕುರಿ, ಮೇಕೆ, ಎಮ್ಮೆ, ಹಸು ರಕ್ಷಿಸುವ ಕುರಿತಂತೆ ಸಾಕಾಣಿಕೆದಾರರಿಗೆ ಪ್ರಕಾಶ್ ರೆಡ್ಡಿ ಸಲಹೆ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಗ್ಗೆ ಆರು ಗಂಟೆಯಿಂದ 11 ಗಂಟೆಯೊಳಗೆ ಹೊರಗಡೆ ಮೇಯಿಸಿ ದಿನಕ್ಕೆ ಮೂರರಿಂದ ನಾಲ್ಕು ಸಾರಿ ಶುದ್ಧ ನೀರನ್ನು ಕುಡಿಸಿ ರಕ್ಷಣೆ ಮಾಡಿಕೊಳ್ಳುವಂತೆ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿರುವವರಿಗೆ ಚಳ್ಳಕೆರೆ ತಾಲೂಕು ನೇರ್ಲಗುಂಟೆ ಪಶು ಆಸ್ಪತ್ರೆ ಜಾನುವಾರು ಅಧಿಕಾರಿ ವಿ.ಎ.ಪ್ರಕಾಶ್ರೆಡ್ಡಿ ಸೂಚಿಸಿದ್ದಾರೆ.ಜಾನುವಾರುಗಳನ್ನು ಮರದ ಕೆಳಗೆ ಅಥವಾ ಕೊಟ್ಟಿಗೆಯಲ್ಲಿ ತಂಪಾದ ಸ್ಥಳದಲ್ಲಿ ಕಟ್ಟಬೇಕು. ಕೊಟ್ಟಿಗೆ ಮೇಲ್ಬಾಗದಲ್ಲಿ ತೆಂಗಿನ ಗರಿಗಳನ್ನು ಹರಡುವುದರಿಂದ ಬಿಸಿಲಿನ ತಾಪ ಕಡಿಮೆಯಾಗಲಿದೆ. ನೀರಿನ ಲಭ್ಯತೆಯಿದ್ದರೆ ದಿನಕ್ಕೆ ಒಂದೆರಡು ಸಾರಿ ಜಾನುವಾರುಗಳ ಮೈತೊಳೆಯಬಹುದು. ಉತ್ತಮ ಎಮ್ಮೆ ಮತ್ತು ಮಿಶ್ರ ತಳಿ ಹಸುಗಳಿಗೆ ನೀರಿನಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹೊದಿಸಿ ಆಗಾಗ್ಗೆ ನೀರು ಸಿಂಪಡಿಸುವುದರಿಂದ ಹಾಲಿನ ಇಳುವರಿ ಹೆಚ್ಚುತ್ತದೆ. ಬಿಸಿಲಿನ ತಾಪದಿಂದ ರಕ್ಷಿಸಬಹುದೆಂದು ಈ ಕುರಿತು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ಕೆ.ಜಿ. ಕಡಲೆಕಾಯಿ ಹಿಂಡಿಯನ್ನು ಐವತ್ತು ಲೀಟರ್ ನೀರಿನಲ್ಲಿ ನೆನೆಸಿ ನೂರು ಕುರಿಗಳಿಗೆ ಕುಡಿಸಬೇಕು. ಮೂರರಿಂದ ನಾಲ್ಕು ಕೆ.ಜಿ.ಜೋಳ ಅಥವಾ ಮುಸುಕಿನ ಜೋಳದ ಕಾಳುಗಳನ್ನು ಈ ಕುರಿಗಳಿಗೆ ತಿನ್ನಿಸಬೇಕು. ಅಗಸೆ, ನುಗ್ಗೆ, ಸೂಬಾಬುಲ್ನಂತಹ ಮೇವನ್ನು ಕೊಡಬೇಕು. ಜಾನುವಾರುಗಳು ಕುಡಿಯುವ ನೀರಿನ ತೊಟ್ಟಿಗೆ ಸುಣ್ಣ ಬಳಿದು ಸ್ವಚ್ಚಗೊಳಿಸಬೇಕು. ಹೀಗೆ ಮಾಡುವುದರಿಂದ ಜಾನುವಾರುಗಳನ್ನು ಬಿಸಿಲಿನ ಝಳದಿಂದ ಕಾಪಾಡಬಹುದು ಎಂದು ಜಾನುವಾರುಗಳ ಮಾಲೀಕರಿಗೆ ತಿಳಿ ಹೇಳಿದ್ದಾರೆ.