ನವನಗರದಲ್ಲಿ ಇರುವ ಮಗಳ ಮನೆಗೆ ಹೋಗಲು ಫ್ಲೈಒವರ್‌ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಫ್ಲೈಒವರ್‌ನಿಂದ ಏಕಾಏಕಿ ಕಬ್ಬಿಣದ ರಾಡ್‌ ಇವರ ಮೇಲೆ ಬಿದ್ದಿದೆ. ಇದರಿಂದ ಇವರ ಮುಖ, ಮೂಗು, ಕಪಾಳ, ಸೊಂಟಕ್ಕೆ ತೀವ್ರ ಹೊಡೆತ ಬಿದ್ದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

ಹುಬ್ಬಳ್ಳಿ:

ಸುರಕ್ಷತಾ ಕ್ರಮವನ್ನು ಅನುಸರಿಸದೆ ಎಎಸ್‌ಐ ಬಲಿಪಡೆದಿಕೊಂಡಿದ್ದ ಇಲ್ಲಿನ ಚನ್ನಮ್ಮ ವೃತ್ತದ ಫ್ಲೈಒವರ್‌ ಕಾಮಗಾರಿಯಿಂದ ಇದೀಗ ವೃದ್ಧೆಯೊಬ್ಬಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತೆವರಮೆಳ್ಳಹಳ್ಳಿ ಗ್ರಾಮದ ಯಶೋದಾ ಜಾಧವ (74) ಗಂಭೀರವಾಗಿ ಗಾಯಗೊಂಡಿರುವ ವೃದ್ಧೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಕಾರ್ಮಿಕರು ಪರಾರಿಯಾಗಿದ್ದಾರೆ.

ನವನಗರದಲ್ಲಿ ಇರುವ ಮಗಳ ಮನೆಗೆ ಹೋಗಲು ಫ್ಲೈಒವರ್‌ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಫ್ಲೈಒವರ್‌ನಿಂದ ಏಕಾಏಕಿ ಕಬ್ಬಿಣದ ರಾಡ್‌ ಇವರ ಮೇಲೆ ಬಿದ್ದಿದೆ. ಇದರಿಂದ ಇವರ ಮುಖ, ಮೂಗು, ಕಪಾಳ, ಸೊಂಟಕ್ಕೆ ತೀವ್ರ ಹೊಡೆತ ಬಿದ್ದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ವೃದ್ಧೆಯನ್ನು ತಕ್ಷಣ ಕೆಎಂಸಿಆರ್‌ಐಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿರುವ ವೈದ್ಯರು ಇವರ ಸೊಂಟದ ಎಲುಬು ಮುರಿದಿದೆ ಎಂದು ತಿಳಿಸಿದ್ದಾರೆ.

ಕಾಲ್ಕಿತ್ತ ಕಾರ್ಮಿಕರು:

ಕಬ್ಬಿಣದ ರಾಡ್‌ ವೃದ್ಧೆ ಮೇಲೆ ಬಿದ್ದು ಅವರು ಕುಸಿಯುತ್ತಿದ್ದಂತ ಕಾಮಗಾರಿಯಲ್ಲಿ ನಿರತರಾಗಿದ್ದ ಕಾರ್ಮಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸಾರ್ವಜನಿಕರು ಎಷ್ಟು ಕರೆದರೂ ಬಾರದೆ ಓಡಿ ಹೋಗಿದ್ದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಮ್ಮ ತಾಯಿ ಮಗಳ ಮನೆಗೆ ತೆರಳುತ್ತಿದ್ದರು. ಈ ವೇಳೆ ಫ್ಲೈಒವರ್‌ ಮೇಲಿಂದ ಕಬ್ಬಿಣದ ರಾಡ್‌ ಬಿದ್ದು ಗಾಯಗೊಂಡಿದ್ದಾರೆ. ಅಲ್ಲಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ಸಾರ್ವಜನಿಕರೇ ಉಪಚರಿಸಿ ಕೆಎಂಸಿಆರ್‌ಐಗೆ ದಾಖಲಿಸಿದ್ದಾರೆ.

ಸತೀಶ ಜಾಧವ, ವೃದ್ಧೆಯ ಮಗ