ಕನ್ನಡಪ್ರಭ ವಾರ್ತೆ ನಂಜನಗೂಡು

ಸಾಮಾಜಿಕ ಐಕ್ಯತೆ ಮತ್ತು ಸಾಂಸ್ಕೃತಿಕ ಗುರುತನ್ನು ಜೀವಂತವಾಗಿರಿಸುವ ಕಲೆಯೇ ಜಾನಪದ ಕಲೆ ಡಾ. ಮಳವಳ್ಳಿ ಮಹದೇವಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಿಸರ್ಗದ ಮಡಿಲಿನಲ್ಲಿ ಜೀವಿಸುವ ಮಾನವ ಸಂಘ ಜೀವಿಯಾಗಿದ್ದು, ಭೌತಿಕ ಪ್ರಪಂಚದಲ್ಲಿ ಬೌದ್ಧಿಕ ಬೆಳವಣಿಗೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿ ಗುರಿಯನ್ನು ಸಾಧಿಸುವಲ್ಲಿ ಪ್ರತಿಯೊಬ್ಬರಿಗೂ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಅವಶ್ಯಕವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಾಗಮವನ್ನು ಕಂಡುಕೊಳ್ಳುವಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಆಸಕ್ತಿ ಮತ್ತು ಪ್ರತಿಭೆಯ ಅನ್ವೇಷಣಾ ಮಾರ್ಗ ಸೂಚಿಗಳಾಗಿವೆ ಎಂದು ಹೇಳುವುದರೊಂದಿಗೆ ಜಾನಪದ ಕಲೆ ಸಾಮಾಜಿಕ ಐಕ್ಯತೆ ಮತ್ತು ಸಂಸ್ಕೃತಿ ಗುರುತನ್ನು ಜೀವಂತವಾಗಿರಿಸುವ ಉತೃಷ್ಠ ಕಲೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಜ್ಞಾನದ ಮಹತ್ವವನ್ನು ಅರಿತು ವಿವೇಚನೆಯಿಂದ ವಿಚಾರವಂತರಾಗಿ ರೂಪುಗೊಳ್ಳಲು ಜನ್ಮ ನೀಡಿದ ತಂದೆ ತಾಯಿ ವಿದ್ಯೆ ಕಲಿಸಿದ ಗುರುಗಳು ಹಾಗೂ ಶಿಕ್ಷಣ ನೀಡಿದ ವಿದ್ಯಾಸಂಸ್ಥೆಗೆ ಅಭಾರಿಯಾಗುವುದರೊಂದಿಗೆ ಸಾಹಿತ್ಯ, ಕಲೆ, ಕ್ರೀಡೆ, ನೃತ್ಯ ಸಂಗೀತ ಹಾಗೂ ಪಠ್ಯ ಪೂರಕ ವಿಷಯಗಳನ್ನು ಅಧ್ಯಯನ ಮಾಡಿ ಸಮುದಾಯದ ಸಾಂಸ್ಕೃತಿಕ ಬೇರನ್ನು ಗಟ್ಟಿಗೊಳಿಸವಲ್ಲಿ ಪ್ರಯತ್ನ ಪಟ್ಟು ಸಾಮಾಜಿಕ ಕೌಶಲ್ಯಗಳು ಮತ್ತು ನಾಯಕತ್ವದ ಗುಣಗಳನ್ನು ರೂಢಿಸಿಕೊಂಡು ಪದವಿಯೊಂದಿಗೆ ನೈಜ ಜ್ಞಾನಿಗಳಾಗಿ ಬದುಕಬೇಕೆಂದು ಆಶಿಸಿ ಭಕ್ತಿ ಪೂರ್ವಕ ಹಾಗೂ ಸತ್ಯಾಧಾರಿತ ಜಾನಪದ ಗೀತೆಗಳನ್ನು ಹಾಡುವುದರ ಮುಖೇನ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಬೇರುಗಳನ್ನು ಜೀವಂತವಾಗಿರಿಸುವ ಕಲೆಯನ್ನು ಕುರಿತು ಅವರು ಮಾತನಾಡಿದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬಾಕ್ಸಿಂಗ್‌ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಸಹನ ವಿದ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ವಿನಯ ಅತಿಮುಖ್ಯವಾಗಿದ್ದು, ವಿದ್ಯೆ ಹಾಗೂ ವಿನಯ ಒಂದುಗೂಡಿದ ವ್ಯಕ್ತಿಗಳಿಗೆ ಸಾಧಕರಾಗುವ ಅವಕಾಶಗಳು ಲಭ್ಯವಿರುತ್ತವೆ ಎಂದು ತಿಳಿಸಿ ಗುರು-ಗುರಿಕಲ್ಪನೆಯಂತೆ ಸಾಧಿಸುವ ಛಲ ಮತ್ತು ಆತ್ಮ ಸ್ಥೈರ್ಯದೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು.


ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜಿ ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಔಪಚಾರಿಕ ಪದವಿ ಪ್ರಮಾಣ ಪತ್ರ ಪಡೆಯದಿದ್ದರೂ ವಿಚಾರವಂತರಾಗಿ ಅನುಭವದೊಂದಿಗೆ ಸಾಹಿತ್ಯ, ಕ್ರೀಡೆ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಹುದೆಂದು ನಿರೂಪಿಸಿದ ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕ ಡಾ. ಮಳವಳ್ಳಿ ಮಹದೇವಸ್ವಾಮಿಯವರ ದೈವಭಕ್ತಿ ಹಾಗೂ ಕಲಾ ಶ್ರೀಮಂತಿಕೆಯನ್ನು ಶ್ಲಾಘಿಸಿ ಕಾಲೇಜಿನಲ್ಲಿ ಪಠ್ಯದಜೊತೆಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ಗಮನಾರ್ಹವಾದ ಸಾಧನೆಯಾಗಿರುವುದು ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹಾಗೂ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಸೃಜನಶೀಲತೆಯ ಶಿಕ್ಷಣದ ಮಹತ್ವವನ್ನು ಅರಿತು ವ್ಯಾಸಂಗ ಮಾಡಬೇಕೆಂದು ತಿಳಿಸಿದರು.

ವಿದ್ಯಾಶರ್ಮ ಸ್ವಾಗತ ನೃತ್ಯ ಹಾಗೂ ಸಂದೇಶ್‌ ಇವರ ಯೋಗ ಪ್ರದರ್ಶನ ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು. ಪ್ರಾಂಶುಪಾಲ ಸಿ.ಎಸ್. ಹೊನ್ನೇಗೌಡ, ಕಾಲೇಜಿನ ವಿದ್ಯಾರ್ಥಿಗಳು ಪಠ್ಯದಂತೆ ಪಠ್ಯ ಪೂರಕ ಚಟುಚಟಿಕೆಗಳಲ್ಲಿ ಪಾಲ್ಗೊಂಡು ಶಿಕ್ಷಣ ಸಂಸ್ಥೆಗೆ, ತಮ್ಮ ಪೋಷಕರಿಗೆ ಹಾಗೂ ಸಮಾಜಕ್ಕೆ ಕೀರ್ತಿ ಮತ್ತು ಯಶಸ್ಸನ್ನು ತರುವಲ್ಲಿ ಪ್ರಯತ್ನಶೀಲರಾಗಿದ್ದಾರೆ ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲ ಕೆ.ಎನ್. ಶಿವಕುಮಾರ್ ಮಾತನಾಡಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.ಪಿ. ಮಮತ, ಕ್ರೀಡಾ ವೇದಿಕೆ ಸಂಚಾಲಕ ಪಿ.ಎಂ. ವಿಕ್ರಂ, ಕಚೇರಿ ಅಧೀಕ್ಷಕ ಕೆ.ವಿ. ಸುಂದರರಾಜು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಇದ್ದರು. ಅಮೃತ ತಂಡದವರು ಪ್ರಾರ್ಥಿಸಿದರು. ಮಾನ್ಯಾ ಸ್ವಾಗತಿಸಿದರು. ಅನಿತಾ ವಂದಿಸಿದರು. ಅಮೃತಾ ಕಾರ್ಯಕ್ರಮ ನಿರೂಪಿಸಿದರು.