ಸಾರಾಂಶ
ಬಳ್ಳಾರಿ: ಇಲ್ಲಿನ ಇಂದಿರಾನಗರದ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಅಕ್ಷಯ ಕಲಾ ಟ್ರಸ್ಟ್ ಹೊಸಯರಗುಡಿ, ಕನ್ನಡ- ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಾನಪದ ಸಾಂಸ್ಕೃತಿಕ ಮುಂಗಾರು ಉತ್ಸವ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ಬಾಬು ಜಗಜೀವನ್ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಮುಂಡರಗಿ ನಾಗರಾಜ್, ನಾಡಿನ ಕಲೆ ಹಾಗೂ ಸಂಸ್ಕೃತಿ ಬಿಂಬಿಸುವ ಚಟುವಟಿಕೆಗಳು ನಿರಂತರ ಜರುಗಬೇಕು. ರಾಜ್ಯ ಸರ್ಕಾರ ನಾಡಿನ ಅನನ್ಯ ಪರಂಪರೆಯ ತಾಣಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು, ಅನೇಕ ಕಲಾ ಪ್ರಕಾರಗಳಿಗೂ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.ಬಳ್ಳಾರಿ ಜಿಲ್ಲೆ ಕಲೆ ಹಾಗೂ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಬಳ್ಳಾರಿಗೆ ಸಾಂಸ್ಕೃತಿಕ ಪರಂಪರೆಯಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಹೆಚ್ಚು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು. ಇದಕ್ಕೆ ಬೇಕಾದ ಎಲ್ಲ ಸಹಕಾರಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಮಹಾನಗರ ಪಾಲಿಕೆಯ ಸದಸ್ಯ ಮಿಂಚು ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಲಿಗೆಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷ ಗಜಣ್ಣ, ಸ್ಥಳೀಯ ಮುಖಂಡರಾದ ಮೋಹನ್ ದಾಸ, ಎಂ.ಮಲ್ಕಪ್ಪ, ಗಂಗಣ್ಣ, ನೃತ್ಯ ಕಲಾವಿದ ಎಸ್.ಎಂ. ಅಭಿಷೇಕ್, ಮುಲುಗಪ್ಪ ವೀರೇಶ್ ದಳವಾಯಿ ಹಾಗೂ ಹುಸೇನಪ್ಪ ಉಪಸ್ಥಿತರಿದ್ದರು.ಕಲಾವಿದ ಹನುಮಯ್ಯ ಮತ್ತು ತಂಡದವರು ವಿವಿಧ ಗೀತೆಗಳನ್ನು ಹಾಡಿದರು.ಹೊಸಪೇಟೆಯ ಗಂಗಮ್ಮ ಮತ್ತು ತಂಡದವರು ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ತಾಯಪ್ಪ ಎಮ್ಮಿಗನೂರು ಗೀಗೀ ಪದಗಳನ್ನು ಹಾಡಿದರು. ಉಷಾ ದಳವಾಯಿ ಸಂಗನಕಲ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ಕೊನೆಯಲ್ಲಿ "ಬುದ್ಧನ ಬೆಳಕು " ನಾಟಕ ಪ್ರದರ್ಶನಗೊಂಡಿತು. ಎರಿಸ್ವಾಮಿ ಇಬ್ರಾಹಿಂಪುರ, ಆನಂದ ಬುಡ್ಡಿ, ಎಚ್.ಸಿ.ಸುಂಕಪ್ಪ ಹಾಗೂ ಎಚ್.ಯೇಸಯ್ಯ ಕಾರ್ಯಕ್ರಮ ನಿರ್ವಹಿಸಿದರು.