ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಆಹಾರ ಉತ್ಸವ, ಶೈಲ ಸಂತೆ

| Published : Jan 13 2025, 12:48 AM IST

ಸಾರಾಂಶ

ಇಂದಿನ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಅಗತ್ಯವಾಗಿದೆ.

ಸಂಡೂರು: ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಶನಿವಾರ ಒಂದರಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಂದ ಆಹಾರ ಉತ್ಸವ ಹಾಗೂ ಶೈಲ ಸಂತೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್ ನಾನಾವಟೆ, ಇಂದಿನ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಪುಸ್ತಕದ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನವು ವೃದ್ಧಿಯಾಗುತ್ತದೆ. ಈ ಉದ್ದೇಶದೊಂದಿಗೆ ಶಾಲೆಯಲ್ಲಿ ಆಹಾರ ಉತ್ಸವ ಮತ್ತು ಶೈಲ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿರುವುದರಿಂದ ಅವರಿಗೆ ಶಾಲೆಯೊಂದಿಗೆ ಅವಿನಾಭಾವ ಸಂಬAಧ ಬೆಳೆಯುತ್ತದೆ. ವಿದ್ಯಾರ್ಥಿಗಳೂ ವ್ಯವಹಾರಿಕ ಜ್ಞಾನದ ಜೊತೆಗೆ ಬದುಕುವ ಕಲೆಯನ್ನು ಕಲಿತಂತಾಗುತ್ತದೆ ಎಂದರು.

ಸಂಸ್ಥೆಯ ಗೌರವಾಧ್ಯಕ್ಷೆ ಲಕ್ಷ್ಮಿ ಎಸ್. ನಾನಾವಟೆ ಮಾತನಾಡಿ, ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ತಮ್ಮ ಪಾಲಕರೊಂದಿಗೆ ವಿವಿಧ ಬಗೆಯ ಪೌಷ್ಠಿಕ ಆಹಾರವನ್ನು ತಯಾರಿಸಿರುವುದು ಸಂತೋಷದ ಸಂಗತಿಯಾಗಿದೆ. ಪೌಷ್ಠಿಕ ಆಹಾರ ಸೇವನೆಯಿಂದ ದೈಹಿಕವಾಗಿ ಸದೃಢವಾಗಲು ಸಾಧ್ಯ. ಮಕ್ಕಳು ಹೊರಗಡೆ ದೊರೆಯುವ ಜಂಕ್ ಫುಡ್ ತಿನ್ನುವ ಬದಲು, ಮನೆಯಲ್ಲಿ ತಾಯಂದಿರು ಮಾಡಿರುವ ಆಹಾರವನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನರಿ ಬಸವರಾಜ, ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ.ಎಸ್. ನಾನಾವಟೆ ಮಾತನಾಡಿದರು.

ಸಂಸ್ಥೆಯ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯಎಂ.ಪಿ ಸನಾವುಲ್ಲಾ, ಉಪನ್ಯಾಸಕರಾದ ನಾಗೇಂದ್ರ ಪ್ರಸಾದ್, ಜಯಪ್ರಕಾಶ್, ಆನಂದ, ಸಂಯೋಜಕರಾದ ರುಕ್ಮಿಣಿ, ಸುಜಾತ ಘೋರ್ಪಡೆ, ವಿನಾಯಕ ರಾವ್ ನಿಕ್ಕಂ, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಶನಿವಾರ ನಡೆದ ಶೈಲ ಸಂತೆ ಕಾರ್ಯಕ್ರಮ ನಡೆಯಿತು.