ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಹಸಿದವರಿಗೆ ಅನ್ನ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕುಶಾಲನಗರ ಮೈಸೂರು ರಸ್ತೆಯ ನಿಸರ್ಗ ಹೋಟೆಲ್ ನಲ್ಲಿ ರೋಟರಿ ಸಂಸ್ಥೆಯಿಂದ ಸೋಮವಾರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಅವರು ನಿರ್ಗತಿಕರಿಗೆ, ಆಟೋ ಚಾಲರಿಗೆ ಕೂಪನ್ ಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಂಸ್ಥೆ ಅಧ್ಯಕ್ಷ ಮನು ಪೆಮ್ಮಯ್ಯ, ಕುಶಾಲನಗರ ರೋಟರಿಯ ಸುವರ್ಣ ಮಹೋತ್ಸವ ಅಂಗವಾಗಿ ಹಸಿದವರಿಗೆ ಅನ್ನ ಎಂಬ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ.ಪ್ರತಿ ದಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಅರ್ಹರಿಗೆ ಉಚಿತವಾಗಿ ಕಲ್ಪಿಸುವ ಯೋಜನೆ ಇದಾಗಿದೆ. ಎರಡೂ ವೇಳೆಯಲ್ಲಿ ಹೋಟೆಲ್ ಮೂಲಕ ಉಚಿತವಾಗಿ ಒದಗಿಸಿದ ಆಹಾರಕ್ಕೆ ರೋಟರಿಯಿಂದ ಹಣ ಪಾವತಿಸಲಾಗುತ್ತದೆ. ಊಟಕ್ಕಾಗಿ ಪರಿತಪಿಸುವ ಅರ್ಹರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು. ಇದು ರೋಟರಿಯ ನಿರಂತರ ಯೋಜನೆಯಾಗಿದೆ ಎಂದು ತಿಳಿಸಿದರು. ಹೋಟೆಲ್ ಮಾಲೀಕರು ಅರ್ಹ ಫಲಾನುಭವಿಗಳ ಬಗ್ಗೆ ನಿಗಾವಹಿಸಲಿದ್ದಾರೆ ಎಂದ ಅವರು ಸಾರ್ವಜನಿಕರು, ದಾನಿಗಳು ಕೂಡ ಈ ಯೋಜನೆಗೆ ಸಹಕಾರ ನೀಡಬಹುದು ಎಂದು ಅವರ ಕೋರಿದರು.
ಈ ಸಂದರ್ಭ ಸಂಸ್ಥೆ ಕಾರ್ಯದರ್ಶಿ ಹೆಚ್.ಪಿ.ಮಂಜುನಾಥ್, ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ರೋಟರಿ ಹಿರಿಯ ಸದಸ್ಯರಾದ ಮಹೇಶ್ ನಾಲ್ವಡಿ, ಡಾ.ಹರಿ ಎ ಶೆಟ್ಟಿ, ಆರತಿ ಶೆಟ್ಟಿ, ರಿಚರ್ಡ್, ಪಿ ಜಿ ಗಂಗಾಧರ್, ಪ್ರಕಾಶ್, ಸುದೀಶ್, ನಿಸರ್ಗ ಹೋಟೆಲ್ ಮಾಲೀಕ ನಾರಾಯಣ್ ಮತ್ತಿತರರು ಇದ್ದರು.ಕುಶಾಲನಗರ ನಿಸರ್ಗ ಹೋಟೆಲ್ ನಲ್ಲಿ ರೋಟರಿ ಸಂಸ್ಥೆಯಿಂದ ಸೋಮವಾರ ರೋಟರಿ ಅಧ್ಯಕ್ಷ ಮನುಪೆಮ್ಮಯ್ಯ ನಿರ್ಗತಿಕರಿಗೆ, ಆಟೋ ಚಾಲರಿಗೆ ಕೂಪನ್ ಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.