ನಾಳೆಗೆ...............ರಾಮನಗರದಲ್ಲಿ ಹೋಟೆಲ್, ಕೆಫೆಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ, ಪರಿಶೀಲನೆ

| Published : Jul 07 2024, 01:17 AM IST

ನಾಳೆಗೆ...............ರಾಮನಗರದಲ್ಲಿ ಹೋಟೆಲ್, ಕೆಫೆಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃತಕ‌ಬಣ್ಣ ಹಾಗೂ ಗುಣಮಟ್ಟವಲ್ಲದ ಪದಾರ್ಥ ಮಾರಾಟ ದೂರಿನ ಹಿನ್ನೆಲೆಯಲ್ಲಿ ರಾಮನಗರದ ಹೋಟೆಲ್, ಬೇಕರಿಗಳ ಮೇಲೆ ಶನಿವಾರ ದಾಳಿ ನಡೆಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿದರು.

-ಅಧಿಕಾರಿ ಚಂದ್ರಶೇಖರ್ ನೇತೃತ್ವದ ತಂಡ 86 ಹೋಟೆಲ್‌, ಕೆಫೆಗಳಲ್ಲಿ ಮಾದರಿ ಸಂಗ್ರಹ

ಕನ್ನಡಪ್ರಭ ವಾರ್ತೆ ರಾಮನಗರ

ಕೃತಕ‌ಬಣ್ಣ ಹಾಗೂ ಗುಣಮಟ್ಟವಲ್ಲದ ಪದಾರ್ಥ ಮಾರಾಟ ದೂರಿನ ಹಿನ್ನೆಲೆಯಲ್ಲಿ ಹೋಟೆಲ್, ಬೇಕರಿಗಳ ಮೇಲೆ ಶನಿವಾರ ದಾಳಿ ನಡೆಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿದರು.

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ ಚಂದ್ರಶೇಖರ್ ನೇತೃತ್ವದ ತಂಡ ಈವರೆಗೆ ರಾಮನಗರದ ತಾಜ್ ಹೋಟೆಲ್ , ರಾಮಘಡ್ ಹೋಟೆಲ್, ಮಾಯಗಾನಹಳ್ಳಿಯಲ್ಲಿನ ರಾಸ್ತಾ ಕೆಫೆ ಸೇರಿದಂತೆ 86 ಕಡೆಗಳಲ್ಲಿ ದಾಳಿ ನಡೆಸಿತು.

ರಾಜ್ಯ ಸರ್ಕಾರ ಕಲರ್ ಮತ್ತು ಟೇಸ್ಟಿಂಗ್ ಪೌಡರ್ ಬಳಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ರೋಚನಾರವರ ಆದೇಶದ ಮೇರೆಗೆ ಕೆಲವೊಂದು ಹೋಟೆಲ್, ಅಂಗಡಿಗಳ ಮೇಲೆ ಆಹಾರ ಸುರಕ್ಷತಾಧಿಕಾರಿಗಳ ತಂಡ ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಅವುಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.

ರಾಮಘಡ್ ಹೋಟೆಲ್‌ನಲ್ಲಿ ಗೋಬಿ ಮಂಚೂರಿ, ರಾಸ್ತಾ ಕೆಫೆಯಲ್ಲಿ ಕೇಕ್ , ಅಮ್ಮುರ್ ಬಿರಿಯಾನಿಯಲ್ಲಿ ಕಬಾಬ್, ಕೇಕ್ ಹಾಗೂ ಇತರೆ ಹೋಟೆಲ್, ಕೆಫೆಗಳಲ್ಲಿ ಆಹಾರ ಪದಾರ್ಥ, ಚೀಜ್ ಕೇಕ್, ವೆಲ್ವೆಟ್ ಕೇಕ್ ಮಾದರಿಯನ್ನು ಅಧಿಕಾರಿಗಳ ತಂಡ ಸಂಗ್ರಹಿಸಿದೆ. ದಾಳಿ ಸಂದರ್ಭದಲ್ಲಿ ಕೆಲ ಹೋಟೆಲ್ ಗಳಲ್ಲಿ ಅವಧಿ ಮೀರಿದ ಆಹೋರಾತ್ಪನ್ನಗಳು ಪತ್ತೆಯಾದರೆ, ಹಲವೆಡೆ ಹೋಟೆಲ್ ಗಳ ಅಡುಗೆ ಮನೆ ಮತ್ತು ಸ್ಟೋರ್ ರೂಮ್ ನೊಳಗಿನ ಆಹಾರ ಪದಾರ್ಥಗಳಲ್ಲಿ ಭಾರೀ ಜಿರಳೆಗಳು ಇದ್ದವು. ಅನೇಕ ಕಡೆಗಳಲ್ಲಿ ಶುಚಿತ್ವ ಕೊರತೆಯೂ ಕಂಡು ಬಂದಿದೆ.

ಹೋಟೆಲ್, ಕೆಫೆಗಳಲ್ಲಿನ ಆಹಾರ ಪದಾರ್ಥಗಳ ಮಾದರಿಯನ್ನು ಬೆಂಗಳೂರು ಪಿಎಚ್ ಐ ಲ್ಯಾಬ್‌ಗೆ ಕಳುಹಿಸಲಾಗಿದೆ. ಅದರ ವರದಿ 10 ದಿನದೊಳಗೆ ಬರಲಿದ್ದು, ಆಹಾರ ಪದಾರ್ಥಗಳಲ್ಲಿ ಕಲರ್ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡಿರುವುದು ದೃಢಪಟ್ಟಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದು ಅಧಿಕಾರಿ ಚಂದ್ರಶೇಖರ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.