ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿನ ಇಂಡಿಗನತ್ತ ಗ್ರಾಮದಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಪ್ರಕರಣ ಸಂಬಂಧ ಚಿರತೆ ಸೆರೆಗೆ ಅರಣ್ಯ ಇಲಾಖೆಯು ನಿರಂತರ ಕಾರ್ಯಾಚರಣೆ ಮುಂದುವರಿಸಿದೆ.

ಮೂರನೇ ದಿನವೂ 60ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯಿಂದ ಚಿರತೆಗಾಗಿ ಶೋಧಕಾರ್ಯ ಮುಂದುವರಿದಿದೆ. ಡ್ರೋಣ್ ಹಾಗೂ ಥರ್ಮಲ್ ಡ್ರೋಣ್ ಮೂಲಕ ಚಿರತೆ ಹುಡುಕುತ್ತಿದ್ದು, ಬೆಳಗಿನ ಜಾವ ಚಿರತೆ ಓಡಾಡುವಾಗ ಕ್ಯಾಮೆರಾ ಟ್ರ್ಯಾಪ್ ನಲ್ಲಿ ಚಿರತೆ ದೃಶ್ಯ ಸೆರೆ ಸಿಕ್ಕಿದ್ದು ಸದ್ಯ ಸೆರೆಗೆ ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ವಿವಿಧ ಮಾದರಿಯ ಬೋನುಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇರಿಸಲಾಗಿದ್ದು ಕಾರ್ಯಾಚರಣೆ ಮುಂದುವರಿದಿದೆ.

ಚಿರತೆ ಕಾರ್ಯಾಚರಣೆ ಪರಿಶೀಲನೆ ನಡೆಸಿದ ಸಿಸಿಎಫ್‌: ಚಾಮರಾಜನಗರ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಮಾಲತಿ ಪ್ರಿಯ ಭೇಟಿ ನೀಡಿ ಪರಿಶೀಲಿಸಿ, ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಾರ್ಯಾಚರಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿಗಾ ವಹಿಸಬೇಕು, ಗ್ರಾಮಗಳ ಬಳಿ ಅಧಿಕಾರಿ, ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಬಂದೋಬಸ್ತ್ ಮಾಡಿ ಚಿರತೆ ಓಡಾಡುವುದನ್ನು ಗಮನದಲ್ಲಿಟ್ಟುಕೊಂಡು ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.