ಬಿಸಿಯೂಟ ಸ್ವಚ್ಚತೆ, ಸುರಕ್ಷತೆ ಕಾಪಾಡಲು ಟಾಸ್ಕ್‌ಫೋರ್ಸ್‌ ರಚನೆ

| Published : Dec 18 2023, 02:00 AM IST

ಬಿಸಿಯೂಟ ಸ್ವಚ್ಚತೆ, ಸುರಕ್ಷತೆ ಕಾಪಾಡಲು ಟಾಸ್ಕ್‌ಫೋರ್ಸ್‌ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಚಲಿಗಾಲದ ಅಧಿವೇಶನದಲ್ಲಿ ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲ್‌ ಪ್ರಶ್ನೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರಿಸಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸಿದ್ದು ಈ ತಂಡ ಎಲ್ಲಾಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟ ಯೋಜನೆಯ ಅನುಷ್ಠಾನದಲ್ಲಿನ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲ್ಯ ವಿಚಾರಗಳನ್ನೆಲ್ಲ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಅಫಜಲ್ಪುರ ತಾಲೂಕಿನ ಚಿಣಮಗೇರಿ ಶಾಲೆಯಲ್ಲಿ ಬಿಸಿ ಸಾಂಬಾರ್‌ನಲ್ಲಿ 2ನೇ ತರಗತಿ ಬಾಲಕಿ ಬಿದ್ದು ಸಾವನ್ನಪ್ಪಿರುವ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಶಾಲಾ ಶಿಕ್ಷಣ ಇಲಾಖೆ ಇದೀಗ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸಿದ್ದು ಈ ತಂಡ ಎಲ್ಲಾಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟ ಯೋಜನೆಯ ಅನುಷ್ಠಾನದಲ್ಲಿನ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲ್ಯ ವಿಚಾರಗಳನ್ನೆಲ್ಲ ಪರಿಶೀಲಿಸಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮದು ಬಂಗಾರಪ್ಪ ಹೇಳಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಚಲಿಗಾಲದ ಅಧಿವೇಶನದಲ್ಲಿ ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲರ ಪ್ರಶ್ನೆಗೆ ಉತ್ತರಿಸಿರುವ ಅವರು ಬಿಸಿಯೂಟದ ವಿಚಾರದಲ್ಲಿ ಶಾಲೆಗಳಲ್ಲಿ ಪಾಲಿಸಲಾಗುತ್ತಿರುವ ಕ್ರಮಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ತಂಡದ ಸದಸ್ಯರು ಶಾಲೆಗಳವರಿಗೆ ನೀಡುತ್ತಾರೆ. ನೈರ್ಮಲ್ಯ ಹಾಗೂ ಸುರಕ್ಷತೆ ಕುರಿತಂತೆ ಸಿಬ್ಬಂದಿಗೆ ತರಬೇತಿ ಸಹ ನೀಡಲಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಹಾಗೂ ಸುರಕ್ಷತೆಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ತಯ್ಯಾರಿಕೆ ಹಾಗೂ ವಿತರಣೆಗೆ ಮಾರ್ಗಸೂಚಿ ಸಿದ್ಧಗೊಳಿಸಿ ಒದಗಿಸಲಾಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಶಾಲೆಗಳ ಬಿಸಿಯೂಟ ತಯಾರಿಸುವ ಅಡುಗೆ ಕೇಂದ್ರಗಳ ಅವ್ಯವಸ್ಥೆಗಳು, ಕುಂದು ಕೊರತೆಗಳನ್ನು ಗಮನಿಸಿ ಅಗತ್ಯ ಪರಿಹಾರ ಒದಗಿಸಲಾಗುತ್ತಿದೆ. ಅಡುಗೆ ಕೋಣೆಗಳು, ದುರಸ್ಥಿಗೆ ಅನುದಾನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಪೂರ್ಣ ಹಾಳಾದ ಅಡುಗೆ ಕೋಣೆಗಳನ್ನು ನರೇಗಾ ಯೋಜನೆಯಡಿ ಮರು ನಿರ್ಮಾಣಕ್ಕೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಭೋಜನಾಲಯ, ಕೈತೊಳೆಯುವ ಘಟಕಗಳಿಗೂ ಆದ್ಯತೆ ನೀಡಲಾಗುತ್ತಿದೆ.

ರಾಜ್ಯದ ವಾರ್ಷಿಕ ಆಯವ್ಯಯದಲ್ಲಿ ಶಾಲಾ ನಿರ್ವಹಣಾ ವೆಚ್ಚ, ಸಮಗ್ರ ಸಿಕ್ಷಣ ಕರ್ನಾಟಕ ಯೋಜನೆಯಲ್ಲಿ ನಿರ್ವಹಣೆಗೆ ಒದಗಿಸಲಾಗುವ ಅಡುಗೆ ಕೋಣೆ, ನೀರಿನ ಘಟಕಗಳ ನಿರ್ವಹಣೆ, ಸುಣ್ಣಬಣ್ಣ ಹಚ್ಚುವ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಮದು ಬಂಗಾರಪ್ಪ ಶಾಸಕರಾದ ಅಲ್ಲಂಪ್ರಭು ಪಾಟೀಲರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಅನೇಕ ಬಿಸಿಯೂಟದ ವಿತರಣೆಯಲ್ಲಿ ಅಗ್ನಿ ನಂದಕ, ಜಮಖಾನೆ, ಕೈ ತೊಳೆಯುವ ಸವಲತ್ತುಗಳು ಸರಿಯಾಗಿಲ್ಲವೆಂಬುದು ಗಮನದಲ್ಲಿದೆ. ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ಆರೋಗ್ಯ ಸೌಧ ಪ್ರಸ್ತಾವ ಪರಿಶೀಲನೆ: ಬೆಳಗಾವಿ ಸದನದಲ್ಲಿಯೇ ಶಾಸಕ ಅಲ್ಲಂಪ್ರಭು ಪಾಟೀಲರು ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಣ ಇಲಾಖೆ ಜಿಲ್ಲಾ ಮಟ್ಟದ ಕಚೇರಿ ಕಟ್ಟಡ ಯೋಜನೆಯ ಸ್ಥಿತಿಗತಿ ಕುರಿತಂತೆ ಕೇಳಿರುವ ಪ್ರಶ್ನೆಗೆ ಆರೋಗ್ಯ ಖಾತೆ ಸಚಿವ ದಿನೇಶ ಗುಂಡೂರಾವ್‌ ಉತ್ತರಿಸಿದ್ದು ಕಲಬುರಗಿಯಲ್ಲಿ ಆರೋಗ್ಯ ಸೌಧ ನಿರ್ಮಾಣಕ್ಕೆ 26.95 ಕೋಟಿ ರುಪಾಯಿ ಪ್ರಸ್ತಾವನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದಿದ್ದಾರೆ.