ರಾಣಿಬೆನ್ನೂರು: ನನ್ನ ಬೆಂಬಲಿಗರು, ಅಭಿಮಾನಿಗಳ ಒತ್ತಾಸೆ ಹಾಗೂ ರಾಣಿಬೆನ್ನೂರಿನ ಜನರ ಋಣ ತೀರಿಸುವ ಸಲುವಾಗಿ ಕಾಂಗ್ರೆಸ್ ಸೇರಲು ನಿರ್ಧರಿಸಿರುವೆ ಎಂದು ಮಾಜಿ ಸಚಿವ ಆರ್.ಶಂಕರ್ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ನಡೆ ಕುರಿತು ಚರ್ಚಿಸಲು ನಡೆಸಿದ ಅಭಿಮಾನಿಗಳ ಸಭೆಯಲ್ಲಿ ನಾನು ಎಲ್ಲೇ ಇದ್ದರೂ ಬೆಂಬಲ ಕೊಡುತ್ತೇವೆ. ಹೆಚ್ಚಾಗಿ ಕಾಂಗ್ರೆಸ್ಗೆ ಬೆಂಬಲ ಕೊಡಿ ಅಂತ ಹೇಳಿದ್ದಾರೆ. ನಾನು ಮೊದಲ ಬಾರಿಗೆ 2013ರಲ್ಲಿ ಸ್ಥಳೀಯ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿದಾಗ 46 ಸಾವಿರ ಮತ ನೀಡಿದರು. 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗುವಂತೆ ಆಶೀರ್ವಾದ ಮಾಡಿದರು. 2023ರಲ್ಲಿ 36 ಸಾವಿರ ಮತ ನೀಡಿದ್ದಾರೆ. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ನಿಕಟಪೂರ್ವ ಶಾಸಕರನ್ನು ಸಾರಥಿಯಂತೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದೆ. ಆದರೆ ಆಯ್ಕೆಯಾದ ನಂತರ ಅವರು ನನ್ನನ್ನು ಹಾಗೂ ನನ್ನ ಕಾರ್ಯಕರ್ತರನ್ನು ಕಡೆಗಣಿಸಿದರು. ಯಾರು ನನಗೆ ತೇಜೋವಧೆ ಮಾಡಿ ಚಿತ್ರಹಿಂಸೆ ನೀಡಿದ್ದಾರೆಯೋ ಅವರಿಗೆ ಪಾಠ ಕಲಿಸಲು ಹಾಗೂ ತಾಲೂಕಿನ ಅಭಿವೃದ್ಧಿ ಸಲುವಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ ಶಕುನಿ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರು ನನಗೆ ರಾಜಕೀಯ ಮರುಜನ್ಮ ನೀಡಬೇಕು. ಮುಂದೆ ನಾನು ಶಾಸಕನಾಗ್ತಿನೋ, ಹಾಗೆ ಇರುತ್ತೇನೊ ಅದು ನನ್ನ ಹಣೆ ಬರಹ. ಆದರೆ ನಾನು ಶಾಸಕ, ಸಚಿವನಾಗಲು ಕಾರಣರಾದ ಇಲ್ಲಿನ ಜನರ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಸ್ಥಳೀಯ ಶಾಸಕರ ಜೊತೆ ಸೇರಿ ಕೆಲಸ ಮಾಡುತ್ತೇನೆ. ನನಗೆ ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲ್ಲುವ ತಾಕತ್ತಿದೆ. ಎಲ್ಲಾ ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದ್ದು 18-20 ಸೀಟುಗಳನ್ನು ಗೆಲ್ಲುತ್ತದೆ. ನಾನು ಯಾವುದೇ ಆಸೆ ಅಮಿಷಗಳಿಲ್ಲದೆ ಅಭಿಮಾನದಿಂದ ಕಾಂಗ್ರೆಸ್ ಸೇರುತ್ತಿದ್ದೇನೆ. ಅಲ್ಲಿ ತಂದೆ ಸಮಾನರಾದ ಸಿದ್ದರಾಮಯ್ಯ ಹಾಗೂ ಭವಿಷ್ಯದ ನಾಯಕರಾದ ಡಿ.ಕೆ. ಶಿವಕುಮಾರ ಇದ್ದಾರೆ. ಈಗಾಗಲೇ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿನ ನನ್ನ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರ ಏಳಿಗೆಗೆ ಶ್ರಮಿಸುತ್ತೇನೆ ಎಂದರು. ರತ್ನಾಕರ ಕುಂದಪುರ, ರಾಜಣ್ಣ ಅಡಿವೆಪ್ಪನವರ, ಬಿ.ಎಮ್. ಜೋಗಾರ, ಷಣ್ಮಖಪ್ಪ ಕಂಬಳಿ, ಮಂಜಯ್ಯ ಚಾವಡಿ, ಮಂಜುನಾಥ ಕಂಬಳಿ ಸುದ್ದಿಗೋಷ್ಠಿಯಲ್ಲಿದ್ದರು.
ಕಾಂಗ್ರೆಸ್ ಸೇರಲು ಮಾಜಿ ಸಚಿವ ಆರ್.ಶಂಕರ್ ನಿರ್ಧಾರ
ನನ್ನ ಬೆಂಬಲಿಗರು, ಅಭಿಮಾನಿಗಳ ಒತ್ತಾಸೆ ಹಾಗೂ ರಾಣಿಬೆನ್ನೂರಿನ ಜನರ ಋಣ ತೀರಿಸುವ ಸಲುವಾಗಿ ಕಾಂಗ್ರೆಸ್ ಸೇರಲು ನಿರ್ಧರಿಸಿರುವೆ ಎಂದು ಮಾಜಿ ಸಚಿವ ಆರ್.ಶಂಕರ್ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.