ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರದರ್ಶಕ ಕಲೆಗಳ ಉಳಿವಿಗೆ ಸರ್ಕಾರ ನೀತಿ ರೂಪಿಸಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ವಿ.ರಾಜಾರಾಂ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಕರ ಸಂಘವು ಪ್ರದರ್ಶನ ಕಲೆ ಮತ್ತು ಮಾಧ್ಯಮ: ಸಾಂಸ್ಕೃತಿಕ ದೃಷ್ಟಿಕೋನ ಎಂಬ ವಿಷಯದ ಕುರಿತು ಆಯೋಜಿಸಿದ್ದ ಎರಡು ದಿನಗಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರದರ್ಶಕ ಕಲೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಸಾಂಸ್ಕೃತಿಕ ನೀತಿ ರೂಪಿಸಿದರೆ ಒಳ್ಳೆಯದು. ಏಕೆಂದರೆ ಕಲೆಗಳು ಇಂದು ಸಭೆ, ಸಮಾರಂಭಗಳಲ್ಲಿನ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ದೂರದರ್ಶನದಲ್ಲಿ ನಾಟಕ, ಕಲೆಗಳ ಉಳಿವಿಗೆ ಹಲವು ಕಾರ್ಯಕ್ರಮ ಬರುತ್ತಿದೆ ಎಂಬುದನ್ನು ಬಿಟ್ಟರೆ ಕಲೆ, ಸಾಹಿತ್ಯ ಮತ್ತು ರಂಗಭೂಮಿಗೆ ಪತ್ರಿಕೆಗಳಲ್ಲಿ ಮಹತ್ವ ಸಿಗುತ್ತಿಲ್ಲ. ಆದರೆ ಕ್ರೀಡಾ ಸುದ್ದಿಗೆ ಹೆಚ್ಚು ಮಹತ್ವ ಸಿಗುತ್ತಿದೆ. ರೇಡಿಯೋಗಳಲ್ಲಿಯೂ ಪ್ರದರ್ಶನ ಕಲೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಮಾತನಾಡಿ, ಹೊಸ ತಲೆಮಾರಿನ ವರದಿಗಾರರು ಪ್ರದರ್ಶಕ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಬದಲಾದ ಪ್ರಪಂಚದಲ್ಲಿ ತಂತ್ರಜ್ಞಾನವೇ ಮೇಲುಗೈ ಸಾಧಿಸಿದ್ದು, ಕಲೆಯ ಪೋಷಣೆ ಮರೀಚಿಕೆಯಾಗಿದೆ ಎಂದು ವಿಷಾದಿಸಿದರು.ಪತ್ರಿಕೆ ಮತ್ತು ಕಲೆಗಳ ನಡುವಿನ ಸಾಂಸ್ಕೃತಿಕ ಆಯಾಮ ಇಂದು ಬಿರುಕು ಬಿಡುತ್ತಿದೆ. ಎಲ್ಲವನ್ನೂ ದುಡ್ಡಿನಿಂದಲೇ ಅಳೆಯಲಾಗುತ್ತಿದೆ. ದುಡ್ಡು ತರುತ್ತಿಲ್ಲ ಎಂದು ಸಾಂಸ್ಕೃತಿಕ ಮತ್ತು ರಂಗಭೂಮಿ ಪತ್ರಿಕೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ನ್ಯಾಕ್ ಮಾಜಿ ಅಧ್ಯಕ್ಷ ಪ್ರೊ.ಎಸ್.ಸಿ. ಶರ್ಮ ಮಾತನಾಡಿದರು.ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಕೃಪಾ ಪಡ್ಕೆ, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ, ಸಂಗೀತ ವಿವಿ ಪ್ರಭಾರ ಕುಲಸಚಿವೆ ಕೆ.ಎಸ್. ರೇಖಾ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕಿ ಡಾ.ಎನ್. ಮಮತಾ ಮೊದಲಾದವರು ಇದ್ದರು.