ಆರೋಪಿಗಳಾದ ರೋಹಿತ್, ಚಂದ್ರಪ್ಪ, ರಾಜಶೇಖರ್ ಮತ್ತು ವೇಣು ದ್ವಿಚಕ್ರ ವಾಹನಗಳಲ್ಲಿ ಬಂದು ಮಹೇಶ್ ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಬಂಗಾರಪೇಟೆ: ಹಳೆ ವೈಷಮ್ಯ ಹಿನ್ನೆಲೆ ಮಚ್ಚಿನಿಂದ ದಾಳಿ ನಡೆಸಿ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೀಲುಕೊಪ್ಪ ಗ್ರಾಮದಲ್ಲಿ ನಡೆದಿದೆ.ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ದೂರುದಾರ ಯಶ್ವಂತ್ (28), ಆಕಾಶ್ ಹಾಗೂ ಪ್ರಶಾಂತ್ ಅವರು ಪೈಂಟಿಂಗ್ ಕೆಲಸ ಮುಗಿಸಿಕೊಂಡು ಕೀಲುಕೊಪ್ಪ ಗ್ರಾಮದ ಸಮೀಪದ ನಾಗರಾಜ್ ಬಾರ್ & ರೆಸ್ಟೋರೆಂಟ್ನಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಆರೋಪಿ ರೋಹಿತ್ ಮತ್ತು ಆತನ ಸ್ನೇಹಿತರು ಯಶ್ವಂತ್ ಅವರ ಮಹೇಶ್ ಅವರೊಂದಿಗೆ ಹಳೆ ದ್ವೇಷದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಸಿದರು.
ನಂತರ ರಾತ್ರಿ ಸುಮಾರು 10.30 ಗಂಟೆ ವೇಳೆ ಕೀಲುಕೊಪ್ಪ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಮಾರಿಯಮ್ಮ ದೇವರ ಉತ್ಸವ ಮೂರ್ತಿ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳಾದ ರೋಹಿತ್, ಚಂದ್ರಪ್ಪ, ರಾಜಶೇಖರ್ ಮತ್ತು ವೇಣು ದ್ವಿಚಕ್ರ ವಾಹನಗಳಲ್ಲಿ ಬಂದು ಮಹೇಶ್ ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.ಈ ವೇಳೆ ಆರೋಪಿಗಳು ತಮ್ಮ ಕೈಯಲ್ಲಿ ತಂದಿದ್ದ ಮಚ್ಚುಗಳನ್ನು ತೋರಿಸಿ ಬೆದರಿಕೆ ಹಾಕಿ ದಾಳಿ ನಡೆಸಿದ್ದಾರೆ. ಪ್ರಮುಖ ಆರೋಪಿ ರೋಹಿತ್ ಮಚ್ಚಿನಿಂದ ಮಹೇಶ್ ಅವರ ಬಲ ಕಣ್ಣಿನ ಸಮೀಪ ಭಾಗಕ್ಕೆ ಹೊಡೆದು ಗಂಭೀರ ಗಾಯಪಡಿಸಿದ್ದಾನೆ . ಮಧ್ಯ ಪ್ರವೇಶಿಸಲು ಬಂದ ಯಶ್ವಂತ್ ಅವರ ಎಡ ಕೆನ್ನೆ ಭಾಗಕ್ಕೂ ಮಚ್ಚಿನಿಂದ ಹೊಡೆದು ಗಾಯಪಡಿಸಲಾಗಿದೆ
ಘಟನೆಯ ವೇಳೆ ಸ್ಥಳಕ್ಕೆ ಬಂದ ಆಕಾಶ್ ಮತ್ತು ಅಭಿಲಾಷ್ ಮೇಲೆಯೂ ದಾಳಿ ನಡೆಸಿ, ಆಕಾಶ್ ಅವರ ತಲೆಗೆ ಹಾಗೂ ಅಭಿಲಾಷ್ ಅವರ ಎಡ ಹಣೆಗೆ ಮಚ್ಚಿನಿಂದ ಹೊಡೆದು ರಕ್ತಗಾಯ ಉಂಟು ಮಾಡಲಾಗಿದೆ. ಗಾಯಾಳುಗಳು ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೂದಿಕೋಟೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
