ಕನ್ನಡಪ್ರಭವಾರ್ತೆ, ತುರುವೇಕೆರೆ

ಗ್ಯಾಸ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವ ಗ್ರಾಹಕರಿಂದ ಸಿಲೆಂಡರ್ ಹಾಗೂ ತಲಾ 1000 ರು. ಪಡೆದು ವಂಚಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಕುಮಾರ್‌ ಎಂಬ ವ್ಯಕ್ತಿ ಇಲ್ಲಿನ ಖಾಸಗಿ ಗ್ಯಾಸ್‌ ಏಜೆನ್ಸಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪ್ರತಿ ತಿಂಗಳು ಗ್ರಾಹಕರಿಗೆ ಗ್ಯಾಸ್‌ ಸಿಲೆಂಡರ್ ಸಹ ಪೂರೈಕೆ ಮಾಡುತ್ತಿದ್ದ ಅದರಂತೆ ಕಳೆದ ಬಾರಿ ಸಹ ಸುಮಾರು 100 ಗ್ರಾಹಕರಿಂದ ತಲಾ ಸಾವಿರ ರು. ಹಾಗೂ ಸಿಲೆಂಡರ್‌ ಪಡೆದಿದ್ದು ಆದರೆ 10-15 ದಿನಗಳಾದರೂ ಸಹ ಸಿಲೆಂಡರ್‌ ಪೂರೈಕೆಯಾಗದ ಹಿನ್ನೆಲೆಯಲ್ಲಿ ಹಣ ನೀಡಿದ ಗ್ರಾಹಕರು ಏಜೆನ್ಸಿ ಬಳಿ ಬಂದು ವಿಚಾರಿಸಿದಾಗ ಕುಮಾರ್‌ ಹಣ ಹಾಗೂ ಸಿಲೆಂಡರ್‌ ಸಮೇತ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಈಗಾಗಲೇ 77 ಗ್ರಾಹಕರು ದೂರು ದಾಖಲಿಸಿದ್ದು ಗ್ರಾಹಕರ ಜೊತೆಗೆ ಅಂಗನವಾಡಿ, ಶಾಲೆಗಳಿಂದಲೂ ಸಹ ಸಿಲೆಂಡರ್ ಪಡೆದು ವಂಚಿಸಲಾಗಿದೆ. ಈ ಸಂಬಂಧ ಏಜೆನ್ಸಿಯ ಜೀಲಾನ್ ಬೇಗ್ ಪ್ರತಿಕ್ರಿಯಿಸಿ ಹಲವಾರು ಗ್ರಾಹಕರು ತಮ್ಮ ಬಳಿ ಬಂದು ಕುಮಾರ್ ನಮ್ಮಿಂದ ಖಾಲಿ ಸಿಲೆಂಡರ್ ಮತ್ತು ಹಣವನ್ನು ಪಡೆದುಕೊಂಡು ಹೋಗಿದ್ದಾನೆಂದು ದೂರಿದ್ದರು. ಈ ದೂರಿನನ್ವಯ ನಾವು ಸ್ಥಳೀಯ ಪೊಲೀಸರಲ್ಲಿ ಮಾರ್ಚ್ ಲ್ಲಿ ದೂರು ದಾಖಲು ಮಾಡಿದ್ದೇವೆ. ಈಗಾಗಲೇ 77 ಕ್ಕೂ ಹೆಚ್ಚು ಮಂದಿಯಿಂದ ದೂರು ಬಂದಿದೆ. ಇನ್ನೂ ಹಲವರು ದೂರುತ್ತಿದ್ದಾರೆ. ಎಲ್ಲರಿಗೂ ಪ್ರತ್ಯೇಕವಾಗಿ ಸಿಲೆಂಡರ್ ಮತ್ತು ಹಣವನ್ನು ಪಡೆದಿರುವ ಕುರಿತು ಸ್ಥಳೀಯ ಪೊಲಿಸರಲ್ಲಿ ದೂರು ದಾಖಲಿಸಲು ಸೂಚಿಸಿರುವುದಾಗಿ ತಿಳಿಸಿದರು. ಸಿಲೆಂಡರ್ ವಂಚನೆ ಸಂಬಂಧ ತಾವು ನೀಡಿದ್ದ ದೂರಿನ ಮೇರೆಗೆ ಕುಮಾರ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಆದರೆ ಈಗ ಎಪ್ಪತ್ತಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುತ್ತಿದ್ದಾರೆ. ಕುಮಾರ್ ಗ್ರಾಹಕರಿಗೆ ಮೋಸ ಮಾಡಿರುವುದರ ಕುರಿತು ದೂರುಗಳು ದಾಖಲಾಗುತ್ತಿವೆ. ಸದ್ಯ ತಹಸೀಲ್ದಾರ್ ಮತ್ತು ಹಿರಿಯ ಅಧಿಕಾರಿಗಳ ಸಲಹೆಯ ಮೇರೆಗೆ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡು ಖಾಲಿ ಸಿಲೆಂಡರ್ ಗಳನ್ನು ವಶಪಡಿಸಿಕೊಳ್ಳುವ ತನಕ ಗ್ರಾಹಕರಿಗೆ ತಾತ್ಕಾಲಿಕವಾಗಿ ಸಿಲೆಂಡರ್ ನ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸುವಂತೆ ತೀರ್ಮಾನಿಸಲಾಗಿದೆ.