ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಆರೋಗ್ಯ ಸೇವೆ ಇಂದು ಜನಸಾಮಾನ್ಯರ ಕೈಗೆಟುಕದ ಸ್ಥಿತಿಗೆ ಬಂದು ತಲುಪಿದೆ. ಹಾಗಾಗಿ ಬಡವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಮಾಜಿ ಉಪಮೇಯರ್ ಟಿ.ಆರ್ . ನಾಗರಾಜು ಹೇಳಿದರು.ನಗರದ 7ನೇ ವಾರ್ಡಿನ ಅಯಿಲ್ ಮಿಲ್ ರಸ್ತೆಯಲ್ಲಿರುವ ಮಾಜಿ ಉಪಮೇಯರ್ ಟಿ.ಆರ್. ನಾಗರಾಜು ಅವರ ಕಚೇರಿ ಮುಂಭಾಗದಲ್ಲಿ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಡಾ.ಎಸ್. ಪರಮೇಶ್ ಹಿತೈಷಿಗಳ ಬಳಗ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ನಗರದ ನಾಲ್ಕು, ಐದು, ಆರು ಮತ್ತು ಏಳನೇ ವಾರ್ಡುಗಳಲ್ಲಿ ಬಹುತೇಕ ಬಡವರು ಮತ್ತು ಮಧ್ಯಮ ವರ್ಗದ ಜನರು ವಾಸ ಮಾಡುತ್ತಿದ್ದು, ಸಿದ್ಧಗಂಗಾ ಆಸ್ಪತ್ರೆಯವರು ಮಾಡುತ್ತಿರುವ ಈ ಆರೋಗ್ಯ ಶಿಬಿರದಿಂದ ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.ಈ ಭಾಗದ ಎಲ್ಲರೂ ಒಗ್ಗೂಡಿ ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ. ಪರಮೇಶ್ ಅವರಲ್ಲಿ ಮನವಿ ಮಾಡಿದ ಮೇರೆಗೆ ಇಂದು ತನ್ಮ ಎಲ್ಲಾ ವಿಭಾಗದ ತಜ್ಞ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಇಂದು ವಾರ್ಡಿನಲ್ಲಿ ಅರೋಗ್ಯ ಶಿಬಿರ ಏರ್ಪಡಿಸಿದ್ದಾರೆ. ಭಾನುವಾರದ ದಿನ ಮತ್ತೊಂದು ಆರೋಗ್ಯ ಶಿಬಿರವನ್ನು ಆಯೋಜಿಸುವಂತೆ ಮನವಿ ಮಾಡಿದರು.
ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ. ಪರಮೇಶ್ ಮಾತನಾಡಿ, ಈ ಭಾಗದ ನಾಗರಿಕರ ಕೋರಿಕೆಯಂತೆ ಇಂದು ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಮಧುಮೇಹ, ಇಎನ್ಟಿ, ಮೂಳೆ ಮತ್ತು ಕೀಲು, ಸ್ತ್ರೀರೋಗ ತಜ್ಞರು, ಚರ್ಮರೋಗ ತಜ್ಞರು ಹಾಗೂ ಜನರಲ್ ಸರ್ಜನ್, ಅಧಿಕ ರಕ್ತದೊತ್ತಡ, ವೈಟಲ್ಸ್ ಮತ್ತು ಇಸಿಜಿ ಪರಿಶೀಲನೆ ಜೊತೆಗೆ ಮತ್ತು ಉಚಿತವಾಗಿ ಔಷಧಿಯನ್ನು ವಿತರಿಸಲಾಗುತ್ತಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಉಪಮೇಯರ್ ಅವರ ಕೋರಿಕೆಯಂತೆ ದಿನಾಂಕವನ್ನು ನಿಗಧಿ ಪಡಿಸಿ, ಭಾನುವಾರದ ದಿನಗಳಲ್ಲಿಯೇ ಮತ್ತೊಂದು ಬೃಹತ್ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಆಸ್ಪತ್ರೆ ಸಿದ್ಧವಿದೆ. ಅಂದು ಆಸ್ಪತ್ರೆಯ ಎಲ್ಲಾ ವಿಭಾಗಗಳ ತಜ್ಞರನ್ನು ಕರೆತಂದು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಶಿಬಿರ ನಡೆಸಿಕೊಡುವ ಭರವಸೆಯನ್ನು ಡಾ. ಪರಮೇಶ್ ನೀಡಿದರು.
ಈ ವೇಳೆ ಮುಖಂಡರಾದ ಬಾಬಣ್ಣ, ಸುರೇಶ್, ಜಗದೀಶ್, ರವಿ, ನಾಗೇಶ್, ನಯಾಜ್, ಡಾ. ರಾಜ್ ಯುವವೇದಿಕೆ, ಕನ್ನಡ ಸಂಘ, ಚಾಮುಂಡೇಶ್ವರಿ ಯುವಕ ಸಂಘ, ತತ್ವಮನಿ ಭಕ್ತ ಮಂಡಳಿ, ಕೋಟೆ ಬಾಯ್ಸ್, ಮಾರುತಿ ಯುವಕರ ಸಂಘ, ವಿಷ್ಣು ಗೆಳೆಯರ ಬಳಗ, ಇಮ್ರಾನ್, ಚಾಕಿರ್ಪಾಷ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.