ಸಾರಾಂಶ
ನೆಲಕ್ಕೆ ಉರುಳಿರುವ ಮರ, ಮರದ ರೆಂಬೆ ಕೊಂಬೆಗಳನ್ನು ಮೈಸೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಸಮರೋಪಾದಿಯಲ್ಲಿ ತೆರುವುಗೊಳಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶುಕ್ರವಾರ ಸಂಜೆ ಸುರಿದ ಜೋರು ಮಳೆಗೆ ನೂರಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ.ಜೋರು ಬಿರುಗಾಳಿ ಮಳೆಗೆ ನೂರಾರು ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದು, ಇವು ವಿದ್ಯುತ್ ಕಂಬಗಳ ಮೇಲೆ ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿ ಉಂಟು ಮಾಡಿವೆ. ಇದರಿಂದ ನಗರದ ಹಲವು ಬಡಾವಣೆಗಳಲ್ಲಿ ಶುಕ್ರವಾರ ರಾತ್ರಿ ಕಗ್ಗತ್ತಲಿನಲ್ಲಿ ಕಳೆಯಬೇಕಾಯಿತು.ನೆಲಕ್ಕೆ ಉರುಳಿರುವ ಮರ, ಮರದ ರೆಂಬೆ ಕೊಂಬೆಗಳನ್ನು ಮೈಸೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಸಮರೋಪಾದಿಯಲ್ಲಿ ತೆರುವುಗೊಳಿಸುತ್ತಿದ್ದಾರೆ. ಮತ್ತೊಂದೆಡೆ ಸೆಸ್ಕ್ ಸಿಬ್ಬಂದಿ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳನ್ನು ತೆರವು ಮಾಡಿ ಹೊಸ ಕಂಬಗಳು ಅಳವಡಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.ನಗರದ ಸಿಲ್ಕ್ ಫ್ಯಾಕ್ಟರಿ ಬಳಿ ವಿದ್ಯುತ್ ಕಂಬಗಳ ಮೇಲೆ ಬಿದ್ದ ಮರಗಳಿಂದ ಹತ್ತಾರು ಕಂಬಗಳು ಮರಿದು ಬಿದ್ದು ಹಾನಿ ಉಂಟಾಗಿದೆ. ಹೀಗಾಗಿ, ಮೈಸೂರು- ಮಾನಂದವಾಡಿ ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ, ಒನ್ ವೇಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಂಡು, ವಿದ್ಯುತ್ ಕಂಬ ಅಳವಡಿಕೆ ಕಾರ್ಯ ಸಾಗಿತ್ತು.----ಬಾಕ್ಸ್...ಬಾಳೆ ಬೆಳೆ ನಾಶಗಾಳಿ ಮಳೆಯ ಅಬ್ಬರಕ್ಕೆ ಬಾಳೆ ಬೆಳೆನಾಶವಾಗಿರುವ ಘಟನೆ ಮೈಸೂರು ತಾಲೂಕಿನ ಗುಜ್ಜೇಗೌಡನಪುರ ಗ್ರಾಮದಲ್ಲಿ ನಡೆದಿದೆ.ಮೂರು ಎಕರೆ ಜಮೀನಿಗೆ ರೈತ ಪ್ರದೀಪ್ ಅವರು ಬಾಳೆ ಗಿಡ ಹಾಕಿದ್ದರು. ಶುಕ್ರವಾರ ಸುರಿದ ಮಳೆ ಹಾಗೂ ಬಿರುಗಾಳಿಗೆ ಮೂರು ಎಕರೆ ಬಾಳೆ ತೋಟ ಸಂಪೂರ್ಣ ನಾಶವಾಗಿದ್ದು, ಇದನ್ನು ನೋಡಿ ಪ್ರದೀಪ್ ತಾಯಿ ಕಣ್ಣೀರು ಹಾಕಿ ಗೋಳಾಡಿದರು.