ಸಾರಾಂಶ
ದಾವಣಗೆರೆ: ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಧರ್ಮೀಯರು ಉಪವಾಸ ಮಾಡುತ್ತಿದ್ದಾರೆ. ಏ.6ರಂದು ನಗರದ ವಿನೋಬ ನಗರದ 2ನೇ ಮುಖ್ಯರಸ್ತೆಯ ಮಸೀದಿ ಬಳಿ ಅವರಿಗೆ ಪ್ರಾರ್ಥನೆ ನಂತರ ಹಣ್ಣುಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಎಸ್. ದೊಡ್ಡೇಶ್ ಸ್ನೇಹ ಬಳಗದ ಅಧ್ಯಕ್ಷ ಎಚ್.ಎಸ್.ದೊಡ್ಡೇಶ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಣ್ಣುಗಳ ನೀಡಿ, ಹಬ್ಬದ ಶುಭಾಷಯ ಕೋರಲಾಗುವುದು ಎಂದರು.ಏ.11ರಂದು ರಂಜಾನ್ ಹಬ್ಬವನ್ನು ಮುಸ್ಲಿಮರು ಶ್ರದ್ಧಾ-ಭಕ್ತಿಯಿಂದ ಆಚರಿಸಲಿದ್ದಾರೆ. ರೋಜಾ ಆಚರಣೆ ಕೇವಲ ಉಪವಾಸ ಮಾಡುವುದಷ್ಟೇ ಆಗಿರದೇ, ಮತ್ತೊಬ್ಬರ ಹಸಿವು ಹೇಗೆ ಇರುವುದು ಎಂಬುದನ್ನು ಅರಿಯಲು ಮಹಮ್ಮದ್ ಪೈಗಂಬರರು ಉಪವಾಸ ಆಚರಿಸುವಂತೆ ಮುಸ್ಲಿಮರಿಗೆ ಸಂದೇಶ ಸಾರಿದ್ದರು. ಈ ಮಾನವೀಯ ನೀತಿಯನ್ನು ವಿಶ್ವಾದ್ಯಂತ ಮುಸ್ಲಿಂ ಧರ್ಮೀಯರು ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.
ರಂಜಾನ್ ಆಚರಣೆ ಇಸ್ಲಾಂ ಧರ್ಮದಲ್ಲಿ ತನ್ನದೇ ಆದ ವಿಶೇಷತೆ, ಪಾವಿತ್ರ್ಯತೆ ಹೊಂದಿದೆ. ನಮ್ಮ ಸುತ್ತಲಿನ ಬಡವರು, ನಿರ್ಗತಿಕರು, ಅಸಹಾಯಕರು ಹಸಿವಿನಿಂದ ಎಷ್ಟೊಂದು ತೊಂದರೆ ಅನುಭವಿಸುತ್ತಿರಬಹುದು ಎಂಬುದನ್ನು ರೋಜಾ ಮುಖಾಂತರ ಅರಿಯುವುದು, ದುರ್ಬಲರಿಗೆ ಕೈಲಾದಷ್ಟು ದಾನ, ಧರ್ಮ, ಆರ್ಥಿಕ ನೆರವು ಹೀಗೆ ಮಾನವೀಯ ಸೇವೆ ಕೈಗೊಳ್ಳುವುದು ಈ ಹಬ್ಬದ ಪ್ರಮುಖ ಉದ್ದೇಶ, ಪ್ರೇರಣೆಯಾಗಿದೆ. ಭೂಮಿ ಮೇಲೆ ಜೀವಿಸುವ ಮನುಕುಲಕ್ಕೆ ರೋಜಾ ಆಚರಣೆಯು ನೈತಿಕ ಮೌಲ್ಯದ ಸಂದೇಶ ನೀಡುತ್ತದೆ ಎಂದರು.ಈ ಸಂದರ್ಭ ಬಳಗದ ಶೇರ್ ಅಲಿ, ಪರಶುರಾಮ ಹೊರಗೋಡದಿನ್ನಿ, ರೆಹಮಾನ್ ಖಾನ್, ವಿನಾಯಕ ಇತರರು ಇದ್ದರು.
- - - -5ಕೆಡಿವಿಜಿ61:ದಾವಣಗೆರೆಯಲ್ಲಿ ಶುಕ್ರವಾರ ಎಚ್.ಎಸ್.ದೊಡ್ಡೇಶ ರಂಜಾನ್ ವಿಶೇಷ ಕಾರ್ಯಕ್ರಮ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.