ಸಾರಾಂಶ
ಕೊಪ್ಪ, ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಂಡು ತಂದೆ ತಾಯಿ ಹಾಗೂ ಗುರುಗಳ ಕನಸನ್ನು ನನಸಾಗಿಸಲು ಮುಂದಾಗಬೇಕು ಎಂದು ಕೊಪ್ಪ ಪೊಲೀಸ್ ಠಾಣೆ ಉಪನಿರೀಕ್ಷಕ ಬಸವರಾಜ್ ಜಿ.ಕೆ. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಕೊಪ್ಪ
ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಂಡು ತಂದೆ ತಾಯಿ ಹಾಗೂ ಗುರುಗಳ ಕನಸನ್ನು ನನಸಾಗಿಸಲು ಮುಂದಾಗಬೇಕು ಎಂದು ಕೊಪ್ಪ ಪೊಲೀಸ್ ಠಾಣೆ ಉಪನಿರೀಕ್ಷಕ ಬಸವರಾಜ್ ಜಿ.ಕೆ. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಾಳಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವೇದಿಕೆ, ಚಿಕ್ಕಮಗಳೂರು ಜಿಲ್ಲಾ ಪೋಲೀಸ್, ಕೊಪ್ಪ ಪೊಲೀಸ್ ಠಾಣೆಯಿಂದ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
1977ರ ಡಿಸೆಂಬರ್ 7ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮತ್ತು ಬಳಕೆಯ ವಿರೋಧಿ ದಿನವನ್ನಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ಪ್ರತೀ ವರ್ಷ ಜೂ.26ರಂದು ಕರ್ನಾಟಕದಲ್ಲಿ ಮಾದಕ ವಸ್ತುಗಳ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಯಾರದೋ ಆಮಿಷಕ್ಕೊಳಗಾಗಿ ಮಾದಕ ವ್ಯಸನಕ್ಕೆ ಬಲಿಯಾಗಬೇಡಿ. ವ್ಯಸನದಿಂದ ದೂರ ಇದ್ದು ಮಾದಕ ದ್ರವ್ಯಗಳ ಸಾಗಾಟ ಮತ್ತು ಮಾರಾಟ ಕಂಡುಬಂದಲ್ಲಿ ಪೊಲೀಸ್ ಠಾಣೆ ಗಮನಕ್ಕೆ ತರಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಅನಂತ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಮುಂದಿನ ಭವ್ಯ ಪ್ರಜೆಗಳು. ಆದ್ದರಿಂದ ಈಗಿನಿಂದಲೇ ಸುಸ್ಥಿರ ಸಮಾಜ ನಿರ್ಮಾಣದತ್ತ ಗಮನ ಹರಿಸಿ ಎಂದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮಾದಕ ದ್ರವ್ಯ ವಿರೋಧಿ ಸಂಕಲ್ಪ ಕೈಗೊಂಡರು.ಸಮಾಜಶಾಸ್ತ್ರ ಉಪನ್ಯಾಸಕ ನಾಗರಾಜ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
---