ಎಲ್ಲ ಹಂತದಲ್ಲಿ ಜನರ ಸಂಪೂರ್ಣ ಸಹಭಾಗಿತ್ವವೇ ಯಶಸ್ವೀ ಪ್ರಜಾಪ್ರಭುತ್ವ: ಅಣ್ಣಾಮಲೈ

| Published : Jan 12 2025, 01:18 AM IST

ಎಲ್ಲ ಹಂತದಲ್ಲಿ ಜನರ ಸಂಪೂರ್ಣ ಸಹಭಾಗಿತ್ವವೇ ಯಶಸ್ವೀ ಪ್ರಜಾಪ್ರಭುತ್ವ: ಅಣ್ಣಾಮಲೈ
Share this Article
  • FB
  • TW
  • Linkdin
  • Email

ಸಾರಾಂಶ

ಹೆಚ್ಚು ಹೆಚ್ಚು ವಿದ್ಯಾವಂತರಾದ ಯುವ ಜನತೆ ರಾಜಕೀಯ ಪ್ರವೇಶಿಸಬೇಕು. ಪಂಚಾಯತ್ ಮಟ್ಟದ ರಾಜಕೀಯದ ಮೂಲಕ ಪ್ರಜಾಪ್ರಭುತ್ವದ ಸಕ್ರಿಯ ಸಹಭಾಗಿತ್ವಕ್ಕೆ ಪ್ರವೇಶಿಸಬೇಕು ಎಂದು ಅಣ್ಣಾಮಲೈ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಜಾಪ್ರಭುತ್ವದ ಯಶಸ್ಸಿಗೆ ಜನರ ಪಾಲುದಾರಿಕೆ ಅತೀ ಅಗತ್ಯ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಒಂದೇ ರೀತಿಯಾಗಿ ನೋಡುತ್ತದೆಯೇ ಹೊರತು, ಯಾವುದೇ ರಾಜ್ಯಕ್ಕೆ ತಾರತಮ್ಯದ ಧೋರಣೆಯಿಂದ ನೋಡುವುದಿಲ್ಲ. ರಾಜ್ಯದ ಸಂಸದರ ಸಂಖ್ಯೆ ಆಧರಿಸಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ತಮಿಳುನಾಡಿನ ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.

ಭಾರತ್ ಫೌಂಡೇಶನ್ ಆಯೋಜಿಸಿರುವ ಮಂಗಳೂರು ಲಿಟ್ ಫೆಸ್ಟ್‌ನ ೭ನೇ ಆವೃತ್ತಿಯ ಮೊದಲ ದಿನ ಶನಿವಾರ ಕೊನೆಯ ಅಧಿವೇಶನದಲ್ಲಿ ‘ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಆಡಳಿತ’ ಎಂಬ ವಿಚಾರದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿರಿಯ ಪತ್ರಕರ್ತ ಜೈದೀಪ್ ಶೆಣೈ ಸಂವಾದವನ್ನು ನಡೆಸಿಕೊಟ್ಟರು.ಜನರು ತಮ್ಮ ಹಕ್ಕುಗಳನ್ನಷ್ಟೇ ಗಮನಿಸದೆ ಪ್ರಜಾಪ್ರಭುತ್ವದ ಎಲ್ಲ ಪ್ರಕ್ರಿಯೆಗಳಲ್ಲಿ ಸಹಭಾಗಿತ್ವ ಹೊಂದಿದರೆ ಅದು ಸಂಪೂರ್ಣ ಯಶಸ್ವಿಯಾಗುತ್ತದೆ. ಸಹಭಾಗಿತ್ವ ನೀಡುವುದು ಮೂಲಭೂತ ಕರ್ತವ್ಯವೂ ಹೌದು. ಹೆಚ್ಚು ಹೆಚ್ಚು ವಿದ್ಯಾವಂತರಾದ ಯುವ ಜನತೆ ರಾಜಕೀಯ ಪ್ರವೇಶಿಸಬೇಕು. ಪಂಚಾಯತ್ ಮಟ್ಟದ ರಾಜಕೀಯದ ಮೂಲಕ ಪ್ರಜಾಪ್ರಭುತ್ವದ ಸಕ್ರಿಯ ಸಹಭಾಗಿತ್ವಕ್ಕೆ ಪ್ರವೇಶಿಸಬೇಕು ಎಂದು ಅಣ್ಣಾಮಲೈ ಕರೆ ನೀಡಿದರು.ದೇಶದಲ್ಲೀಗ ನವ ಮಧ್ಯಮ ವರ್ಗದ ಜನಸಂಖ್ಯೆ ಹೆಚ್ಚಾಗುತ್ತಿದೆ. ಅಂದರೆ ಆರ್ಥಿಕ ಅಭಿವೃದ್ಧಿಯ ಫಲಗಳು ಅವರನ್ನು ತಲುಪುತ್ತಿವೆ. ಈ ವರ್ಗದ ಆಶೋತ್ತರಗಳು, ನಿರೀಕ್ಷೆಗಳು ಹೆಚ್ಚುತ್ತಿವೆ. ಅದೇ ವೇಳೆಗೆ ಹಿರಿಯ ನಾಗರಿಕರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅವರ ಆರೋಗ್ಯಪಾಲನೆ ಕೂಡ ಸವಾಲಾಗುತ್ತಿದೆ. ಇದು ಯಾವುದೇ ದೇಶಕ್ಕೆ ಒಂದಲ್ಲ ಒಂದು ಹಂತದಲ್ಲಿ ಎದುರಾಗುತ್ತದೆ. ಇವನ್ನೆಲ್ಲ ಒಂದು ಪ್ರಜಾಸತ್ತಾತ್ಮಕ ದೇಶವಾಗಿ ಭಾರತ ನಿರ್ವಹಿಸಬೇಕಾಗಿದೆ ಎಂದು ಅಣ್ಣಾಮಲೈ ಹೇಳಿದರು.

ದ್ವೇಷದ ರಾಜಕಾರಣ ಕೂಡದು: ಕರ್ನಾಟಕದಲ್ಲಿ ನಡೆಯುತ್ತಿದೆ ಎನ್ನಲಾಗುವ ರಾಜಿ ರಾಜಕೀಯ- ಹೊಂದಾಣಿಕೆ ರಾಜಕೀಯದ ಬಗ್ಗೆ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಅಣ್ಣಾ ಮಲೈ, ಪ್ರಾಥಮಿಕವಾಗಿ ರಾಜಕೀಯ ಎಂಬುದು ಒಂದಲ್ಲ ಒಂದು ರೀತಿಯ ಹೊಂದಾಣಿಕೆಯ ವ್ಯವಸ್ಥೆಯೊಂದಿಗೇ ಸಾಗಬೇಕಿದೆ. ವೈಯಕ್ತಿಕ ದ್ವೇಷಕ್ಕೆ ರಾಜಕೀಯದಲ್ಲಿ ಅವಕಾಶ ಇರಕೂಡದು. ಪ್ರಧಾನಿ ಮೋದಿ ಅವರು ೨೦೧೪ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ ಮೊದಲ ಅವಧಿಯಲ್ಲಿ ೩೭೦ನೇ ವಿಧಿ ರದ್ದು ಮಾಡಲಿಲ್ಲ. ಸೂಕ್ತ ಸಮಯ, ಹದಗೊಂಡ ವಾತಾವರಣಕ್ಕಾಗಿ ಕಾದು ೨೦೧೯ರ ಆಗಸ್ಟ್‌ನಲ್ಲಿ ರದ್ದುಮಾಡಿದರು. ಇದೂ ಸಹ ಹೊಂದಾಣಿಕೆ ರಾಜಕೀಯವೇ ಆಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಅವಧಿಯಲ್ಲಿ ತಮಿಳುನಾಡಿನ ಡಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡಿದ್ದರು. ಜಮ್ಮು- ಕಾಶ್ಮೀರದಲ್ಲಿ ಒಂದು ಹಂತದಲ್ಲಿ ಬಿಜೆಪಿ ಆಡಳಿತ ಸರಕಾರದ ಭಾಗವಾಗಿರದಿದ್ದರೆ ೩೭೦ನೇ ವಿಧಿ ರದ್ದು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೂ ಸಹ ಹೊಂದಾಣಿಕೆ ರಾಜಕೀಯದ ಒಂದು ಕಾರ್ಯತಂತ್ರವೇ ಆಗಿತ್ತು. ಹಾಗಾಗಿ ರಾಜಿ ರಾಜಕೀಯ ಎನ್ನುವ ಬಿಂಬಿಸುವಿಕೆ ಸರಿಯಲ್ಲ ಎಂದು ಅಣ್ಣಾಮಲೈ ಪ್ರತಿಪಾದಿಸಿದರು.