ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಗಣೇಶ ಚತುರ್ಥಿ ಅಂಗವಾಗಿ ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಯಿತು.ನಗರಸಭಾ ಅಧ್ಯಕ್ಷ ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ ಪಿ ಲಕ್ಷ್ಮಯ್ಯ ಇತರರು ಪ್ರತಿಷ್ಠಾಪನೆ ವೇಳೆ ಹಾಜರಿದ್ದು ಮೊದಲ ಪೂಜೆ ಮಾಡಿ ಗಮನ ಸೆಳೆದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಕಳೆದ 63 ವರ್ಷಗಳಿಂದ ವಿಜೃಂಭಣೆ, ಸೌಹಾರ್ದತೆಯಿಂದ ಗಣೇಶ ಹಬ್ಬ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಕೂಡ ಹಬ್ಬ ಅದ್ಧೂರಿಯಿಂದ ಕೂಡಿರಲಿ ಎಂದು ಹೇಳಿದರು.ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ಶ್ರೀ ವಿದ್ಯಾ ಗಣಪತಿ ಮಂಡಳಿ ವತಿಯಿಂದ 63ನೇ ವರ್ಷದ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬ್ರಹ್ಮಾಸ್ ಗಣಪತಿ ಮೂರ್ತಿ ಕೂರಿಸಿ ಅದ್ಧೂರಿಯಾಗಿ ಜಾನಪದ ಕಲಾತಂಡಗಳೊಂದಿಗೆ ವಿಸರ್ಜನೆ ಮಾಡಲಾಗುವುದು. ಇದಕ್ಕೆ ನಗರದ ಎಲ್ಲ ಸಮುದಾಯದ ಮುಖಂಡರ ಸಹಕಾರ ಅಗತ್ಯವಾಗಿದೆ ಎಂದರು.
ಶ್ರೀ ವಿದ್ಯಾಗಣಪತಿ ಮಂಡಳಿ ಅಧ್ಯಕ್ಷ ಶಿವಣ್ಣ ಮಾತನಾಡಿ, ಶ್ರೀ ವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಒಂದಲ್ಲಾ ಒಂದು ವೈವಿದ್ಯಮಯ ಗಣಪತಿ ಪ್ರತಿಷ್ಠಾಪನೆಗೆ ಮಾಡಿಕೊಂಡು ಬರಲಾಗಿದೆ. ಸಣ್ಣ ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದೆ. ಸದ್ಯದಲ್ಲೇ ಗಣಪತಿ ಮೂರ್ತಿ ವಿಸರ್ಜನೆ ಗೆ ದಿನಾಂಕ ನಿರ್ಧರಿಸಲಾಗುವುದು ಎಂದರು.ಶ್ರೀವಿದ್ಯಾ ಗಣಪತಿ ಮಂಡಳಿ ಉಪಾಧ್ಯಕ್ಷ ಶಿವುವಿರಾಟ್ ಮಾತನಾಡಿ, ಚಾಮರಾಜನಗರ ಶ್ರೀವಿದ್ಯಾಗಣಪತಿ ಮಂಡಳಿಯು ತನ್ನದೆಯಾದ ಇತಿಹಾಸ, ಪರಂಪರೆಯನ್ನು ಹೊಂದಿದೆ. ಬ್ರಹ್ಮಾಸ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಿದ್ದು, ಕಾರಣಾಂತರಗಳಿಂದ ಸಣ್ಣ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಗಣಪತಿ ಮಂಡಳಿ ವತಿಯಿಂದ ಸಾಮಾಜಿಕ ಸೇವಾ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀವಿದ್ಯಾ ಗಣಪತಿ ಮಂಡಳಿಯ ಕಾರ್ಯಾಧ್ಯಕ್ಷ ಬುಲೆಟ್ ಚಂದ್ರನಾಯಕ, ಪ್ರಧಾನ ಕಾರ್ಯದರ್ಶಿ ಗಳಾದ. ಬಂಗಾರನಾಯಕ, ಮಹೇಶ್, ಉಪಾಧ್ಯಕ್ಷ ವಿರಾಟ್ ಶಿವು, ಎಸ್ .ಕಿರಣ್, ರಮೇಶ್, ನಗರಸಭಾ ಸದಸ್ಯರಾದ ಸುದರ್ಶನ್ ಗೌಡ, ಶಿವರಾಜ್, ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಮಾಜಿ ಸದಸ್ಯ ಸುಂದರ್ ರಾಜ್, ಮುಖಂಡರಾದ ಬಾಲಸುಬ್ರಹ್ಮಣ್ಯಂ, ನೂರೊಂದು ಶೆಟ್ಟಿ, ಮಾಜಿ ಚುಡ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ, ಅಧ್ಯಕ್ಷ ಸೈಯದ್ ರಫೀ, ಯ.ಮಾಧು, ರಾಜುನಾಯಕ, ಚಂದ್ರಶೇಖರ, ಮಾರ್ಕೇಟ್ ಕುಮಾರ್, ನವೀನ್, ರಾಜು ಭಕ್ತಿ, ಶ್ರೀನಿಧಿ ಕುದರ್, ಪಾಪಣಿ, ಶ್ರೀನಿವಾಸಗೌಡ, ಶಂಕರ್, ಕಾಂತರಾಜು, ಎಂ.ಎಸ್.ಚಂದ್ರಶೇಖರ್, ಅಶ್ವಿನ್ಇತರರು ಹಾಜರಿದ್ದರು.