ಗಣೇಶೋತ್ಸವ ಇತ್ತೀಚೆಗೆ ಭಕ್ತಿಗಿಂತ ಪ್ರತಿಷ್ಠೆಯ ಹಬ್ಬವಾಗಿ ಪರಿವರ್ತನೆಯಾಗುತ್ತಿದೆ. ಹಾಡು, ಸಂಗೀತ, ನೃತ್ಯದ ಜಾಗದಲ್ಲಿ ಡಿಜೆ ಬಂದು ಕುಳಿತಿದೆ. ಅದು ತಪ್ಪಲ್ಲ. ಆದರೆ, ಭಕ್ತಿಪೂರ್ವಕ ಕಾರ್ಯಕ್ರಮಗಳಿಗೆ ಗಣೇಶೋತ್ಸವಗಳಲ್ಲಿ ಮನ್ನಣೆ ಸಿಗುತ್ತಿಲ್ಲ. ಎಲ್ಲರನ್ನೂ ಒಗ್ಗೂಡಿಸುವ ಸಲುವಾಗಿ ಹುಟ್ಟಿಕೊಂಡಿದ್ದೇ ಗಣೇಶೋತ್ಸವ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾವು ಪೂಜಿಸುವ ಗಣೇಶ ಈ ನೆಲದ ರಾಯಭಾರಿಯಾಗಿದ್ದು, ಶ್ರದ್ಧಾ-ಭಕ್ತಿಯಿಂದ ಪೂಜಿಸಿ, ಆರಾಧಿಸಿ, ಅಷ್ಟೇ ಗೌರವ ಪೂರ್ವಕವಾಗಿ ವಿಸರ್ಜಿಸಿದಾಗ ಗಣೇಶೋತ್ಸವ ಆಚರಣೆಗೆ ಅರ್ಥ ಬರಲಿದೆ ಎಂದು ಖ್ಯಾತ ನರರೋಗ ತಜ್ಞ ಡಾ.ಅನಿಲ್‌ ಆನಂದ್‌ ತಿಳಿಸಿದರು.ಇಲ್ಲಿನ ಅಶೋಕ ನಗರದಲ್ಲಿ ಮಹಾಬಲ ಗಣೇಶೋತ್ಸವ ಸಮಿತಿಯಿಂದ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಗೌರಿ-ಗಣೇಶ ಹಬ್ಬ ನಮ್ಮ ಸಂಸ್ಕೃತಿಯ ಸಂಕೇತ. ಗಣೇಶೋತ್ಸವಗಳಲ್ಲಿ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಹಬ್ಬಕ್ಕೆ ಮೆರುಗನ್ನು ನೀಡಬೇಕು ಎಂದು ನುಡಿದರು.

ಗಣೇಶೋತ್ಸವ ಇತ್ತೀಚೆಗೆ ಭಕ್ತಿಗಿಂತ ಪ್ರತಿಷ್ಠೆಯ ಹಬ್ಬವಾಗಿ ಪರಿವರ್ತನೆಯಾಗುತ್ತಿದೆ. ಹಾಡು, ಸಂಗೀತ, ನೃತ್ಯದ ಜಾಗದಲ್ಲಿ ಡಿಜೆ ಬಂದು ಕುಳಿತಿದೆ. ಅದು ತಪ್ಪಲ್ಲ. ಆದರೆ, ಭಕ್ತಿಪೂರ್ವಕ ಕಾರ್ಯಕ್ರಮಗಳಿಗೆ ಗಣೇಶೋತ್ಸವಗಳಲ್ಲಿ ಮನ್ನಣೆ ಸಿಗುತ್ತಿಲ್ಲ. ಎಲ್ಲರನ್ನೂ ಒಗ್ಗೂಡಿಸುವ ಸಲುವಾಗಿ ಹುಟ್ಟಿಕೊಂಡಿದ್ದೇ ಗಣೇಶೋತ್ಸವ. ಯಾವುದೇ ರಾಗಾ-ದ್ವೇಷಗಳಿಲ್ಲದೆ ಎಲ್ಲರೂ ಪರಸ್ಪರ ಪ್ರೀತಿಯಿಂದ ಹಬ್ಬವನ್ನು ಆಚರಿಸಬೇಕು. ಆಗ ಮಾತ್ರ ಉತ್ಸವಗಳು, ಹಬ್ಬಗಳು ಸಾರ್ಥಕತೆ, ಅರ್ಥಪೂರ್ಣತೆ ಪಡೆದುಕೊಳ್ಳತ್ತವೆ ಎಂದರು.

ಗಣೇಶೋತ್ಸವ ಯಾವುದೇ ಧರ್ಮದ ವಿರೋಧಿಯಲ್ಲ. ಈಗ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಧರ್ಮವಿರೋಧಿ ಭಾವನೆ ಮೂಡಿಸುತ್ತಿರುವಂತೆ ಕಂಡುಬರುತ್ತಿರುವುದು ವಿಪರ್ಯಾಸದ ಸಂಗತಿ. ಇದು ನಮ್ಮ ಸಂಸ್ಕೃತಿಯಲ್ಲ. ನಮ್ಮ ಸಂಸ್ಕೃತಿ, ಹಬ್ಬಗಳು, ಆಚರಣೆಗಳು ವಿಶ್ವಕ್ಕೇ ಮಾದರಿಯಾಗುವಂತಿವೆ. ಅವುಗಳಿಗೆ ಬೇರೆ ಅರ್ಥ ಬರುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು. ಹಬ್ಬ ಆಚರಣೆಯಲ್ಲಿ ಸಂಸ್ಕಾರವಿರಬೇಕು. ಸಂಸ್ಕೃತಿಯ ನೆಲಗಟ್ಟನ್ನು ಯಾರೂ ಮೀರಿ ಹೋಗಬಾರದು ಎಂದರು.

ಗಣೇಶೋತ್ಸವದ ಪ್ರಯುಕ್ತ ಬಾಲ ಪ್ರತಿಭೆಗಳು, ನೃತ್ಯ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಯೋಜಕರು ಡಾ.ಅನಿಲ್‌ ಆನಂದ್‌ ಅವರನ್ನು ಸನ್ಮಾನಿಸಿ ಗೌರವಿಸಿದರು. ರಕ್ಷಿತ್‌, ಅಕ್ಷಯ್‌ ಇತರರಿದ್ದರು.ಇಂದು ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-06 ಹೊಸಹಳ್ಳಿ ಫೀಡರ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.17 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ. 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ಎಫ್-06 ಹೊಸಹಳ್ಳಿ ಫೀಡರ್‌ನ ಪ್ರದೇಶಗಳಾದ ಹೊಸಹಳ್ಳಿ, ಹಾಲಹಳ್ಳಿ, ಹನಿಯಾಮಂಬಾಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೊತ್ತತ್ತಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಟಿ.ಚಂದ್ರಮೌಳಿ ತಿಳಿಸಿದ್ದಾರೆ.