ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೃಹತ್ ಗೀತೋತ್ಸವದಂಗವಾಗಿ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರ ಇದರ 8 ವಿದ್ಯಾರ್ಥಿಗಳಿಂದ ಸ್ಮೃತಿ ಪ್ರತಿಭಾ ಪ್ರದರ್ಶನ ಮತ್ತು ಗೀತಾ ತ್ರಯೋದಶಾವಧಾನ ಕಾರ್ಯಕ್ರಮ ಜರಗಿತು.ಈ ಕಾರ್ಯಕ್ರಮವನ್ನು ವೈಶಿಷ್ಟ್ಯ ಪೂರ್ಣವಾಗಿ ನಡೆಸಿಕೊಟ್ಟ ಖ್ಯಾತ ಶಿಕ್ಷಣ ತಜ್ಞ ಶ್ರೀ ಗೋಪಾಡ್ಕರ್ ದಂಪತಿಗಳು ಮಕ್ಕಳಲ್ಲಿರುವ ಅನೇಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು.ಕಿರಿಯ ಮಕ್ಕಳು ೧೩ ರೀತಿಯ ಅವಧಾನವನ್ನು ಸವಾಲಾಗಿ ಸ್ವೀಕರಿಸಿ ತನ್ಮಧ್ಯೆ ತಾವೇ ಚಿತ್ರ ಬಿಡಿಸಿ ಪ್ರದರ್ಶಿಸಿದ್ದು ಮಾತ್ರವಲ್ಲ, ಎಲ್ಲಾ ಹೆಸರುಗಳನ್ನು ಕ್ರಮವಾಗಿ ನೆನಪಿಸಿ ತಿಳಿಸಿದ ಕ್ರಮ ಕ್ಕಿಕ್ಕಿರಿದ ಸಭಿಕರೆಲ್ಲರ ಅಪಾರ ಮೆಚ್ಚುಗೆಗೆ ಕಾರಣವಾಯಿತು.ಗೋಪಾಡ್ಕರ್ ಅವರು ಆಧುನಿಕ ಪುಸ್ತಕ ಹೊರೆಯ ಶಿಕ್ಷಣಕ್ಕೆ ವಿದಾಯ ಹೇಳಿ ಮಕ್ಕಳನ್ನು ಅತ್ಯಂತ ಮೇಧಾವಿಗಳನ್ನು ಮಾಡಲು ಪಣತೊಟ್ಟು ಯಶಸ್ವಿಯಾಗಿರುತ್ತಾರೆ. ಮಾತ್ರವಲ್ಲ ಈ ವಿನೂತನ ಶಿಕ್ಷಣವನ್ನು ಮಂಗಳೂರಿನ ಸ್ವರೂಪಾಧ್ಯಯನ ಕೇಂದ್ರ ಎಂಬ ತಾವು ನಿರ್ಮಿಸಿದ ಸಂಸ್ಥೆಯ ಮೂಲಕ ಎಲ್ಲೆಡೆ ಪರಿಚಯಿಸಲು ಸನ್ನದ್ಧರಾಗಿದ್ದಾರೆ.
ಗೀತೋತ್ಸವದಲ್ಲಿ ಮಿಂಚಿದ ಈ ಮಕ್ಕಳ ಸ್ಮೃತಿ ಪ್ರತಿಭಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಮೂಡಿ ಬಂತು.ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಎಲ್ಲಾ ಎಂಟು ಮಕ್ಕಳನ್ನು ಹರಸಿದರು. ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು.