ಗಜೇಂದ್ರಗಡ: ಸಮಾಜದಲ್ಲಿ ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ಹಾಗೂ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವವರು ಇರುವವರೆಗೆ ಇಡೀ ಭೂಮಂಡಲ ಸುಭಿಕ್ಷವಾಗಿರುತ್ತದೆ ಎಂದು ಬೆಳಗಾವಿಯ ಡಾ. ಎಂ.ಎಸ್. ಕಡ್ಡಿ ಹೇಳಿದರು.

ಇಲ್ಲಿನ ಕೆಳಗಲಪೇಟೆಯ ಬನಶಂಕರಿ ದೇವಸ್ಥಾನ ಬಳಿ ಭಾನುವಾರ ಶಾಂತಮ್ಮ ಶಂಕ್ರಪ್ಪ ಕಡ್ಡಿ ಸ್ಮರಣಾರ್ಥ ಕಡ್ಡಿ ಕುಟುಂಬ ನಿರ್ಮಿಸಿದ ನೂತನ ದೇವಾಂಗ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿ ಸಾಕಷ್ಟು ಜನರು ಹಣವಂತರು, ಗುಣವಂತರು ಹಾಗೂ ಮುಖಂಡರು ಕಾಣಸಿಗುತ್ತಾರೆ. ಆದರೆ ಸಹಾಯ, ಸಹಕಾರ ಎನ್ನುವ ಪ್ರವೃತ್ತಿ ಇರುವ ವ್ಯಕ್ತಿಗಳಿಂದ ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ. ನನಗೆ ಸಮಾಜ ಏನು ಕೊಟ್ಟಿತು ಎನ್ನುವ ಮನಸ್ಥಿತಿಯಿಂದ ಹೊರಬರಬೇಕಿದೆ ಎಂದರು.

ಜನನದಿಂದ ಹಿಡಿದು ಸಾವಿನವರೆಗೆ ಸಮಾಜ ಬೇಕಾಗುತ್ತದೆ. ಹೀಗಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ದೆಸೆಯಲ್ಲಿ ಶಾಂತಮ್ಮ ಶಂಕ್ರಪ್ಪ ಕಡ್ಡಿ ಸ್ಮರಣಾರ್ಥ ಕಡ್ಡಿ ಕುಟುಂಬ ವತಿಯಿಂದ ದೇವಾಂಗ ಸಮಾಜಕ್ಕೆ ನೂತನ ಸಮುದಾಯ ಭವನ ಅರ್ಪಿಸಿದ್ದು ಸ್ವಾಗತಾರ್ಹ ಎಂದರು.

ಸಮಾಜದ ಉಪಾಧ್ಯಕ್ಷ ಶ್ರೀಧರ ಬಿದರಳ್ಳಿ ಮಾತನಾಡಿ, ಪಟ್ಟಣದ ದೇವಾಂಗ ಸಮಾಜದವರು ಧಾರ್ಮಿಕ ಕಾರ್ಯಕ್ರಮ ಸೇರಿ ಇತರ ಕಾರ್ಯಕ್ರಮ ನಡೆಸಲು ಸಮುದಾಯ ಭವನದ ಅಗತ್ಯವಿತ್ತು. ಇದನ್ನು ಮನಗಂಡ ಕಡ್ಡಿ ಕುಟುಂಬದವರು ಇಲ್ಲಿನ ಕೆಳಗಲಪೇಟೆಯ ಬನಶಂಕರಿ ದೇವಸ್ಥಾನ ಬಳಿಕ ಶಾಂತಮ್ಮ ಶಂಕ್ರಪ್ಪ ಕಡ್ಡಿ ಸ್ಮರಣಾರ್ಥ ಸಮಾಜಕ್ಕೆ ಉತ್ತಮ ಗುಣಮಟ್ಟದ ಹಾಗೂ ಭವ್ಯವಾದ ಸಮುದಾಯ ಭವನವನ್ನು ನಿರ್ಮಿಸಿಕೊಡುವ ಮೂಲಕ ಸಮಾಜಪರ ಚಿಂತನೆ ಬಿತ್ತಿದ್ದು ಅನುಕರಣೀಯ. ಹೀಗಾಗಿ ನಾನು ಎನ್ನುವ ಬದಲು ನಾವು ಎಂಬುದಕ್ಕೆ ಈ ಸಮುದಾಯ ಭವನ ಸಾಕ್ಷಿಯಾಗಿದ್ದು, ಸಮಾಜಕ್ಕೆ ನೀಡಿರುವ ಸಮುದಾಯ ಭವನ ಸದ್ಬಳಕೆ ಮಾಡಿಕೊಳ್ಳೋಣ ಎಂದರು.ಈ ವೇಳೆ ಶಾಂತಾಬಾಯಿ ದಶರಥಗೌಡ ಸಿನ್ನೂರ ಸ್ಮರಣಾರ್ಥ ದೇವಾಂಗ ಸಮಾಜಕ್ಕೆ ₹೩.೫೦ ಲಕ್ಷವನ್ನು ದಶರಥಗೌಡ ಸಂಕನಗೌಡ ಸಿನ್ನೂರ ಅವರು ದೇಣಿಗೆ ನೀಡಿದರು. ಬಳಿಕ ಕಡ್ಡಿ ಕುಟುಂಬವನ್ನು ದೇವಾಂಗ ಸಮಾಜದಿಂದ ಸನ್ಮಾನಿಸಿ ಗೌರವಿಸಿದರು.ಸಮಾಜದ ಅಧ್ಯಕ್ಷ ಸಂಕಣ್ಣ ಎಸ್. ಕಡ್ಡಿ, ಉಪಾಧ್ಯಕ್ಷ ಶ್ರೀಧರ ಬಿದರಳ್ಳಿ, ಪರಣ್ಣ ಕಡ್ಡಿ, ನಾರಾಯಣಗೌಡ ಸಿನ್ನೂರ, ಪುಂಡಲೀಕ ಕಡ್ಡಿ, ಪಾಂಡು ಜುಂಜಾ, ಮನೋಹರ ಹವಳದ, ಶ್ರೀಶೈಲ ಹಾದಿಮನಿ, ಮಲ್ಲಿಕಾರ್ಜುನ ಇಂಜನಿ, ಯಲ್ಪಪ್ಪ ಪಪ್ತಿ, ಮಲ್ಲು ಕೊಳ್ಳಿ, ವಿಶಾಲ ಕಡ್ಡಿ, ಶಿವಶಂಕರಪ್ಪ ಕೊಪ್ಪರದ, ಶ್ರೀಧರ ಗಂಜಿಗೌಡರ, ರಾಘವೇಂದ್ರ ಹೊಳಗಿ, ಲಕ್ಷ್ಮಣ ಜುಂಜಾ, ಅಶೋಕ ಕುದರಿಮೋತಿ, ಪ್ರಕಾಶ ಕೊಳ್ಳಿ, ಶಂಕರ ಇಂಜನಿ, ಮಂಜುನಾಥ ಚಳಮರದ, ವಿರೂಪಾಕ್ಷ ದಟ್ಟಿ, ರಮೇಶ ಕೊಳ್ಳಿ, ರಾಜು ಗಂಜಿ ಸೇರಿ ಇತರರು ಇದ್ದರು.