ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಮದ್ಯದಂಗಡಿಯೊಂದರಲ್ಲಿ ಸ್ವಚ್ಛತಾ ಕೆಲಸದಲ್ಲಿ 12ವರ್ಷದ ಬಾಲಕಿ ನಿರತರಾಗಿರುವ ದೃಶ್ಯ ವೈರಲ್‌ ಆಗುತ್ತಿದ್ದಂತೆ ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.ಕೊಳ್ಳೇಗಾಲ ತಾಲೂಕಿನ ಕೊತ್ತನೂರು ಗ್ರಾಮದ ದೀಪಾ ವೈನ್ಸ್‌ನಲ್ಲಿ ಬಾಲಕಿಯೋರ್ವಳು ಸ್ವಚ್ಛತಾ ಕೆಲಸ ಮಾಡುತ್ತಿದ್ದ ವಿಡಿಯೋ ದೃಶ್ಯಾವಳಿ ವೈರಲ್‌ ಆಗಿತ್ತು. ವಿಡಿಯೋ ಮಾಡುತ್ತಿದ್ದ ವೇಳೆ ಕೆಲವರು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ ಎಂಬ ಮಾತುಗಳನ್ನಾಡಿದ್ದು ಸಹ ಸಾಕಷ್ಟು ವೈರಲ್ ಆಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಮೇಲ್ವಿಚಾರಕಿ ಪೂರ್ಣಿಮಾ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಸಿದ್ದರಾಜು, ಕ್ಷೇತ್ರ ಸಮನ್ವಯಾಧಿಕಾರಿ ಮಹೇಶ್ ಕುಮಾರ್‌ ಇನ್ನಿತರರು ಕೊತ್ತನೂರು ಗ್ರಾಮಕ್ಕೆ ತೆರಳಿ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯಿಂದ ಹೇಳಿಕೆ ಪಡೆದು ನಿಯಮಾನುಸಾರ ಕ್ರಮ ಜರುಗಿಸುವಂತೆ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿದ್ದ ಮೇರೆಗೆ ಕಾರ್ಮಿಕ ನಿರೀಕ್ಷಕ ವಿ.ಎಲ್‌. ಪ್ರಸಾದ್‌ರವರು ಗ್ರಾಮಾಂತರ ಪೊಲೀಸರಿಗೆ ಮದ್ಯದಂಗಡಿ ಮಾಲೀಕ ಗೋವರ್ಧನ್ ವಿರುದ್ದ ಲಿಖಿತ ದೂರು ಸಲ್ಲಿಸಿದ್ದಾರೆ.---