ಸಾರಾಂಶ
ಹಾವೇರಿ: ಬರ ನಿರ್ವಹಣೆ ಕುರಿತಂತೆ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸ್ಥಿತಿಗತಿಗಳ ಕುರಿತಂತೆ ಗ್ರಾಮವಾರು ಮಾಹಿತಿ ಸಂಗ್ರಹಿಸಲು ನೇಮಕಗೊಂಡ ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳು ಗ್ರಾಮವಾರು ವಸ್ತುಸ್ಥಿತಿಯ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕು ಹಂತದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ಸಮಿತಿ ರಚನೆಯಾಗಿದೆ. ಆದರೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ತಹಸೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳ ಮಾಹಿತಿ ಹೊರತುಪಡಿಸಿ ಗ್ರಾಮ ಹಂತದಲ್ಲಿ ಬರ ಪರಿಸ್ಥಿತಿಯ ನೈಜ ಸ್ಥಿತಿ ಹಾಗೂ ಪರ್ಯಾಯ ಕ್ರಮಗಳ ಕುರಿತಂತೆ ನೆಲಸ್ಥಿತಿಯ ವಾಸ್ತವ ವರದಿ ಸಲ್ಲಿಸುವಂತೆ ತಿಳಿಸಿದರು.ಕುಡಿಯುವ ನೀರಿನ ಪೂರೈಕೆ ಸ್ಥಿತಿಗತಿ ಕುರಿತು ನೈಜ ಮಾಹಿತಿ ಸಂಗ್ರಹಿಸಿ. ಕುಡಿಯುವ ನೀರು ಪೂರೈಕೆಗೆ ಇರುವ ಮೂಲಗಳು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾವ ಗ್ರಾಮಗಳು ಹಾಗೂ ಪಟ್ಟಣಗಳು ಅಥವಾ ಬಡಾವಣೆಗಳ ಮಾಹಿತಿಯನ್ನು ಸಂಗ್ರಹಿಸಿ ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಪೈಪ್ಲೈನ್, ಕೊಳವೆಬಾವಿ, ಒವರ್ಹೆಡ್ ಟ್ಯಾಂಕ್ಗಳ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿಗಳನ್ನು ಸಂಗ್ರಹಿಸಬೇಕು. ಇವುಗಳ ಕಾರ್ಯಕ್ಷಮತೆ, ನಿರುಪಯುಕ್ತ ಹಾಗೂ ದುರಸ್ತಿ ಹಾಗೂ ಪ್ಲಸ್ಸಿಂಗ್ ಮೂಲಕ ಮರು ಬಳಕೆ ಕುರಿತಾಗಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ವಿವರವಾದ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚಿಸಿದರು.
ಸರ್ಕಾರಿ ಮತ್ತು ಖಾಸಗಿ ಕೊಳವೆಬಾವಿಗಳ ಸಂಖ್ಯೆ ಸಂಗ್ರಹಿಸಿ, ಯಾವ ಗ್ರಾಮಗಳಲ್ಲಿ ಯಾವ ದಿನಗಳಿಂದ ನೀರಿನ ಕೊರತೆ ಉಂಟಾಗಬಹುದು? ಒಂದೊಮ್ಮೆ ನೀರಿನ ಕೊರತೆ ಉಂಟಾದರೆ ನೀರು ಪೂರೈಕೆಗೆ ಪರ್ಯಾಯ ಮಾರ್ಗಗಳ ಕುರಿತಂತೆ ವಿವರವಾದ ವರದಿ ನೀಡುವಂತೆ ಸೂಚನೆ ನೀಡಿದರು.ಟ್ಯಾಂಕರ್ ಕೊನೆಯ ಆಯ್ಕೆ: ಎಲ್ಲ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಕೊಳ್ಳಬೇಕು. ಮಾಲೀಕರೊಂದಿಗೆ ಬಾಡಿಗೆ ಒಪ್ಪಂದ ಮಾಡಿಕೊಂಡು ಈ ಕೊಳವೆಬಾವಿಗಳಿಂದ ನೀರಿನ ಪೂರೈಕೆಗೆ ಕ್ರಮವಹಿಸಬೇಕು. ಟ್ಯಾಂಕರ್ ಬಳಕೆ ಕೊನೆಯ ಆಯ್ಕೆಯಾಗಬೇಕು ಎಂದರು.
ಮೇವಿನ ಲಭ್ಯತೆ: ಪ್ರತಿ ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆ, ಮೇವಿನ ದಾಸ್ತಾನು, ಮುಂದಿನ ಎಷ್ಟು ವಾರದವರೆಗೆ ಮೇವು ದಾಸ್ತಾನಿದೆ? ಮೇವಿನ ಲಭ್ಯತೆ ಎಲ್ಲಿದೆ ಎಂದು ಗುರುತಿಸಿ ನಿಖರವಾದ ಮಾಹಿತಿ ಪಡೆಯಿರಿ. ಅನಿವಾರ್ಯ ಎದುರಾದರೆ ಗೋಶಾಲೆ ಹಾಗೂ ಮೇವಿನ ಬ್ಯಾಂಕ್ಗಳ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಹೊರ ಜಿಲ್ಲೆಗಳಿಗೆ ಮೇವು ಮಾರಾಟ ಹಾಗೂ ಸಾಗಾಣಿಕೆ ಮೇಲೆ ನಿಗಾವಹಿಸಬೇಕು. ಕೃತಕ ಮೇವಿನ ಅಭಾವ ಸೃಷ್ಟಿಸಿ ದಾಸ್ತಾನು ಮಾಡಿಕೊಳ್ಳುವವರ ಮೇಲೆ ನಿಗಾವಹಿಸಿ ಎಂದು ಸೂಚನೆ ನೀಡಿದರು.ನೂರೈವತ್ತು ದಿನ ಖಾತ್ರಿ ಕೆಲಸ: ಜಿಪಂ ಸಿಇಒ ಅಕ್ಷಯ್ ಶ್ರೀಧರ ಮಾತನಾಡಿ, ಕೇಂದ್ರ ಸರ್ಕಾರ ಆದೇಶಿಸಿದ ತಕ್ಷಣ ನೂರು ದಿನದಿಂದ ನೂರೈವತ್ತು ದಿನಗಳಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲಾಗುವುದು. ಜ. ೧ರಿಂದ ಜೂ. ೩೦ರ ವರೆಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲು ಈಗಾಗಲೇ ಗ್ರಾಮವಾರು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು.ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ಮಹ್ಮದ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್. ಸಂತಿ ಇತರರು ಇದ್ದರು.