ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಪಾಲಕರು ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ಕೊಡಿಸಿದರೂ, ಉತ್ತಮ ಸಂಸ್ಕಾರ ನೀಡುವುದನ್ನು ಮರೆಯಕೂಡದು ಎಂದು ರಾಚನಗೌಡ ಮುದ್ನಾಳ ಹೇಳಿದರು.ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಶ್ರೀಮಠದ ಆವರಣದಲ್ಲಿ ಶ್ರೀಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಧುನೀಕರಣದ ಇಂದಿನ ಜಗತ್ತಿನಲ್ಲಿ ಮನುಷ್ಯ ಎಲ್ಲವನ್ನೂ ಆವಿಷ್ಕಾರ ಮಾಡಿದ್ದಾನೆ. ಆದರೆ, ಸಂಸ್ಕಾರ ರಹಿತನಾಗಿ ಬದುಕುತ್ತಿದ್ದಾನೆ ಹಾಗೂ ಗ್ರಾಮೀಣ ಭಾಗದಲ್ಲಿ ಜಾತ್ರೆ, ಉತ್ಸವ ಆಚರಿಸುವುದು ಮನದ ಮೈಲಿಗೆ ತೊಳೆದು, ಅಂತರಂಗದಲ್ಲಿ ಜ್ಞಾನದ ಜ್ಯೋತಿ ಹಚ್ಚಿಸಲು. ಪ್ರತಿವರ್ಷದಂತೆ ಈ ವರ್ಷ ಸಹ ಜಾತ್ರೆ ಅದ್ಧೂರಿಯಾಗಿ ನಡೆಯಲು ಭಕ್ತರ ಸಹಕಾರ ಅಗತ್ಯವಾಗಿದೆ ಎಂದರು. ಗ್ರಾಮದ ಗಿರೀಶ್ ಮಾಲಿ ಪಾಟೀಲ್ ಮಾತನಾಡಿ, ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ಶ್ರೀಮಠ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದರು. ಸಾನ್ನಿಧ್ಯವನ್ನು ಪೀಠಾಧಿಪತಿ ಶ್ರೀಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ವಹಿಸಿದ್ದರು. ಪ್ರವಚನಕಾರ ರೇವಣಸಿದ್ದಯ್ಯ ಶಾಸ್ತ್ರಿಗಳು, ಮಹಾಂತಯ್ಯ ಸ್ವಾಮಿ ಹಿರೇಮಠ, ಪ್ರಮುಖರಾದ ನಾಗರಡ್ಡಿಗೌಡ ಪಾಟೀಲ್, ಭೀಮರಡ್ಡಿಗೌಡ ಬನ್ನೆಟ್ಟಿ ಸೇರಿ ಇತರರಿದ್ದರು. ಶಿವಪ್ಪ ಮಡಿವಾಳ ನಿರೂಪಿಸಿ, ವಿರೂಪಾಕ್ಷಯ್ಯ ಸ್ವಾಮಿ ಮಠಪತಿ ಸ್ವಾಗತಿಸಿದರು. ಈ ವೇಳೆ ಜಾತ್ರೆ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.