ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಮತ್ತಾವರ ಗ್ರಾಮದ ಗಿರಿಜಮ್ಮ ಎಂಬುವವರ ಮನೆಯಲ್ಲಿ ನಡೆದಿದ್ದ ಚಿನ್ನದ ಒಡವೆ ಕಳ್ಳತನ ಪ್ರಕರಣವನ್ನು ಅರೇಹಳ್ಳಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳತನವಾಗಿದ್ದ ಚಿನ್ನದ ಒಡವೆಗಳು ಹಾಗೂ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯವನ್ನು ಹಾಸನ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶುಭನ್ವಿತಾ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ತಮ್ಮಯ್ಯ ಎಂ.ಕೆ. ಮತ್ತು ಶ್ರೀನಿಧಿ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು. ಅರಸೀಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗೋಪಿ ಬಿ.ಆರ್‌ ಅವರ ನಿರ್ದೇಶನದಲ್ಲಿ ಹಾಗೂ ಹಳೇಬೀಡು ವೃತ್ತ ನಿರೀಕ್ಷಕರಾದ ಜಗದೀಶ ಬಿ.ಸಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಅರೇಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶೋಭ ಅವರೊಂದಿಗೆ ಸಿಬ್ಬಂದಿಯಾದ ಸುಪ್ರೀತ್, ರವಿಚಂದ್ರ , ರವೀಶ್, ಶಂಶುದ್ದೀನ್, ಹೇಮಕಾಂತ್, ಫಕ್ರುದ್ದೀನ್ ಸೇರಿದ್ದರು.ತನಿಖೆಯ ವೇಳೆ ಕಳ್ಳತನ ಪ್ರಕರಣದ ಆರೋಪಿ ಗಿರೀಶ (35 ವರ್ಷ) ಚಿಕ್ಕಬಿಕ್ಕೋಡು ಗ್ರಾಮದವನು ಎಂದು ತಿಳಿದು ಬಂದಿದೆ. ಈತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಗಿರಿಜಮ್ಮರವರ ಮನೆಯಿಂದ ಕಳ್ಳತನವಾಗಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಹಾಗೂ 15 ಗ್ರಾಂ ಬೆಳ್ಳಿಯ ಒಡವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.