ಸಾರಾಂಶ
ಸಚಿವ ಸಂಪುಟದ ವಿರೋಧದ ಮಧ್ಯೆಯೂ ಜೆಎಸ್ಡಬ್ಲೂ ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ 3666 ಎಕರೆ ಜಮೀನು ಮಾರಾಟ ಮಾಡಿದ್ದು ತಪ್ಪು. ಇದು ರಾಜ್ಯದ ಜನರ ಆಸ್ತಿ. ಸಂಡೂರು ಭಾಗದಲ್ಲಿ ಮಣ್ಣಿಗೆ ಚಿನ್ನದ ಬೆಲೆ ಇದೆ. ಇಂತಹ ಭೂಮಿಯನ್ನು ಎಕರೆಗೆ ₹ 1.22 ಲಕ್ಷಕ್ಕೆ ಮಾತ್ರ ಪರಿಹಾರ ಪಡೆಯಲಾಗುತ್ತಿದೆ.
ಧಾರವಾಡ/ಹುಬ್ಬಳ್ಳಿ:
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ. 29ರ ನಂತರ ಮುಖ್ಯಮಂತ್ರಿಗಳಾಗಿ ಇರುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಇಂತಹ ಸಮಯದಲ್ಲಿ ವಿರೋಧದ ಮಧ್ಯೆಯೂ ಜಿಂದಾಲ್ ಕಂಪನಿಗೆ ಸಾವಿರಾರು ಎಕರೆ ಪರಭಾರೆ ಮಾಡುವ ಮೂಲಕ ರಾಜ್ಯ ಸರ್ಕಾರ ಇನ್ನೊಂದು ದೊಡ್ಡ ಹಗರಣಕ್ಕೆ ಕೈ ಹಾಕಿದೆ ಎಂದು ವಿಧಾನಸಭಾ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಹೇಳಿದರು.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ವಿರೋಧದ ಮಧ್ಯೆಯೂ ಜೆಎಸ್ಡಬ್ಲೂ ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ 3666 ಎಕರೆ ಜಮೀನು ಮಾರಾಟ ಮಾಡಿದ್ದು ತಪ್ಪು. ಇದು ರಾಜ್ಯದ ಜನರ ಆಸ್ತಿ. ಸಂಡೂರು ಭಾಗದಲ್ಲಿ ಮಣ್ಣಿಗೆ ಚಿನ್ನದ ಬೆಲೆ ಇದೆ. ಇಂತಹ ಭೂಮಿಯನ್ನು ಎಕರೆಗೆ ₹ 1.22 ಲಕ್ಷಕ್ಕೆ ಮಾತ್ರ ಪರಿಹಾರ ಪಡೆಯಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಿದ್ದಾಗ 2013ರಲ್ಲೂ ಇದೇ ಪ್ರಸ್ತಾವನೆ ಬಂದಾಗ ನಾವು ಹೋರಾಟ ಮಾಡಿದ್ದೇವು. ಮುಂದೆ ಮೈತ್ರಿ ಸರ್ಕಾರದಲ್ಲೂ ಎಚ್.ಕೆ. ಪಾಟೀಲ ಸೇರಿದಂತೆ ನಾವೆಲ್ಲರೂ ವಿಧಾನಸಭೆಯಲ್ಲಿಯೇ ಮಲಗಿ ಪ್ರತಿಭಟನೆ ಮಾಡಿದ್ದೇವು. ಈಗ ಮತ್ತೆ ಹೋರಾಟ ಮಾಡುವ ಸಮಯ ಬಂದಿದೆ. ಕಾನೂನು ಹೋರಾಟ ಸಹ ಮಾಡುವ ಬಗ್ಗೆ ಚಿಂತನೆ ನಡೆದಿದೆ. ರಾಜ್ಯದ ಸಂಪತ್ತನ್ನು ನಾಶ ಮಾಡಲು ಬಿಡುವುದಿಲ್ಲ ಎಂದರು.
ಮುಖ್ಯಮಂತ್ರಿಗಳು ಮುಡಾ ಹಗರಣದಲ್ಲಿ ಸಿಲುಕಿದ್ದು, ಕಾಂಗ್ರೆಸ್ ಅದರಿಂದ ಹೊರ ಬರುವುದು ಬಿಟ್ಟು ಮತ್ತೊಂದು ದೊಡ್ಡ ಹಗರಣಕ್ಕೆ ಕೈ ಹಾಕುತ್ತಿದೆ. ಇದನ್ನು ವಿರೋಧಿಸಿ ನಾನು ಆ ಭಾಗದ ರೈತರನ್ನು ಮತ್ತು ನಿಸರ್ಗ ಪ್ರೇಮಿಗಳನ್ನು ಕರೆದುಕೊಂಡು ಹೋರಾಟ ಮಾಡುತ್ತೇನೆ. ಕಂಪನಿಗಳಿಗೆ ಬೇಕಾಬಿಟ್ಟಿ ದರದಲ್ಲಿ ಭೂಮಿಯನ್ನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಬೆಲ್ಲದ ಈ ವಿಷಯದಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.